ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಡೆಂಗಿಜ್ವರ ನಿಯಂತ್ರಣಕ್ಕೆ ಮುಂದಾಗಿ’– ಡಾ.ಉಮೇಶ ಜಾಧವ

ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಡಾ.ಉಮೇಶ ಜಾಧವ
Last Updated 26 ಸೆಪ್ಟೆಂಬರ್ 2021, 14:02 IST
ಅಕ್ಷರ ಗಾತ್ರ

ಕಲಬುರ್ಗಿ: ‘ಜಿಲ್ಲೆಯಲ್ಲಿ ಡೆಂಗಿಜ್ವರ ವ್ಯಾಪಕವಾಗಿ ಹರಡಿದ್ದು, ನಿಯಂತ್ರಣಕ್ಕೆ ಮುಂದಾಗಬೇಕು. ಪ್ರಕರಣಗಳ ಸಂಖ್ಯೆ ಹೆಚ್ಚದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು’ ಎಂದು ಸಂಸದ ಡಾ.ಉಮೇಶ ಜಾಧವ ಅವರು ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ನಗರದಲ್ಲಿ ಭಾನುವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಪಾಲಿಕೆ ಅಧಿಕಾರಿಗಳೊಂದಿಗೆ ಡೆಂಗಿಜ್ವರ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಕರಿತು ಪರಿಶೀಲಿಸಲು ತುರ್ತುಸಭೆಯ ನಡೆಸಿ ಅವರು ಮಾತನಾಡಿದರು.

ಡೆಂಗಿಜ್ವರಕ್ಕೆ ಸಂಬಂಧಿಸಿ ಜಿಲ್ಲೆಯಲ್ಲಿ ಚಿಕಿತ್ಸೆ, ಔಷಧೋಪಚಾರ, ಬೆಡ್‌ ಸೌಕರ್ಯಗಳ ಕುರಿತು ಅವರು ಮಾಹಿತಿ ಪಡೆದರು.

‘ಡೆಂಗಿ, ಚಿಕೂನ್‌ಗುನ್ಯಾ ಮುಂತಾದ ವೈರಲ್ ಜ್ವರಗಳಿಗೆ ಸೂಕ್ತ ಚಿಕಿತ್ಸೆಗೆ ನೀಡಬೇಕು. ಗ್ರಾಮೀಣ ಜನರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಜಿಮ್ಸ್ ಆಸ್ಪತ್ರೆಯಲ್ಲಿ ಬೆಡ್, ಆಮ್ಲಜನಕ ವ್ಯವಸ್ಥೆಯಲ್ಲಿ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು’ ಎಂದು ಜಿಮ್ಸ್ ಹಾಗೂ ಇಎಸ್ಐ ಆಸ್ಪತ್ರೆಯ ನಿರ್ದೇಶಕರಿಗೆ ತಿಳಿಸಿದರು.

ಸಭೆಗೆ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶರಣಬಸಪ್ಪ ಗಣಜಲಖೇಡ, ‘ಜಿಲ್ಲೆಯಲ್ಲಿ ಇದೇ ಜನವರಿಯಿಂದ ಸೆಪ್ಟೆಂಬರ್‌ವರೆಗೆ ಡೆಂಗಿಜ್ವರ ಕಾಣಿಸಿಕೊಂಡಿದ್ದು, ಇದರ ಪ್ರಕರಣಗಳನ್ನು ಈಗಲೂ ಕಲೆಹಾಕಲಾಗುತ್ತಿದೆ. ಅಫಜಲಪುರ ತಾಲ್ಲೂಕಿನಲ್ಲಿ– 106 ಜನರ ರಕ್ತದ ಮಾದರಿ ಪಡೆಯಲಾಗಿದ್ದು, ಪೈಕಿ 14 ಜನರಲ್ಲಿ ಡೆಂಗಿಜ್ವರ ದೃಢಪಟ್ಟಿದೆ.ಅಂತೆಯೇ, ಆಳಂದ– 85 ಜನರ ಪೈಕಿ 28 ಜನರಿಗೆ ಡೆಂಗಿ ಪಾಸಿಟಿವ್,ಚಿಂಚೋಳಿ– 82 ಪೈಕಿ 12, ಚಿತ್ತಾಪುರ– 447 ಪೈಕಿ 64, ಕಲಬುರ್ಗಿ ನಗರ– 453 ಪೈಕಿ 105, ಕಲಬುರ್ಗಿ ಗ್ರಾಮೀಣ– 36 ಪೈಕಿ 11, ಜೇವರ್ಗಿ– 247 ಪೈಕಿ 65, ಸೇಡಂ– 114 ಪೈಕಿ 14, ವಿ.ಆರ್.ಡಿ.ಎಲ್. –2127 ಪೈಕಿ 49 ಜನರಲ್ಲಿ ಡೆಂಗಿ ಪಾಸಿಟಿವ್ ಆಗಿದೆ’ ಎಂದರು.

‘ಈವರೆಗೆ ಒಟ್ಟು 1,782 ಜನರ ರಕ್ತದ ಮಾದರಿ ಪಡೆಯಲಾಗಿದ್ದು, ಆ ಪೈಕಿ ಒಟ್ಟಾರೆ 362 ಜನರಲ್ಲಿ ಈ ಜ್ವರ ದೃಢಪಟ್ಟಿದೆ. ಅಲ್ಲದೇ, ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಇಲಾಖೆ ಸಿಬ್ಬಂದಿ ಮನೆ-ಮನೆಗೆ ತೆರಳಿ ಅರಿವು ಮೂಡಿಸುತ್ತಿದ್ದಾರೆ. ಜತೆಗೆ ಸಮೀಕ್ಷೆಯನ್ನೂ ಮಾಡುತ್ತಿದ್ದಾರೆ’ ಎಂದು ಗಣಜಲಖೇಡ ಅವರು ಮಾಹಿತಿ ನೀಡಿದರು.

ನಂತರ ಮಾತನಾಡಿದ ಡಾ.ಜಾಧವ, ‘ನಗರದಲ್ಲಿ ನೈರ್ಮಲ್ಯ ಕಾಪಾಡಬೇಕು. ಪ್ರತಿ ವಾರ್ಡ್‌ಗಳಲ್ಲಿ ಫಾಗಿಂಗ್ (ಸೊಳ್ಳೆ ನಿವಾರಕ) ಮಾಡುವ ಮೂಲಕ ಸೊಳ್ಳೆಗಳ ಕಾಟ ತಪ್ಪಿಸಬೇಕು. ಇದರಲ್ಲಿ ಯಾವುದೇ ಕಾರಣಕ್ಕೂ ಹಿಂದೇಟು ಹಾಕುವುದನ್ನು ನಾನು ಸಹಿಸುವುದಿಲ್ಲ. ಈಗಾಗಲೇ ಪಾಲಿಕೆ ಫಾಗಿಂಗ್‌ ಆರಂಭಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದು ಸರಿಯಾಗಿ ನಡೆಯುತ್ತಿದೆಯೇ ಎಂದು ಆಯುಕ್ತರೇ ಪರಿಶೀಲಿಸಿ ಖಚಿತ ಮಾಡಿಕೊಳ್ಳಬೇಕು. ನಗರದಲ್ಲೇ ಹೆಚ್ಚು ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವ ಕಾರಣ ಸೊಳ್ಳೆ ನಿಯಂತ್ರಣ ಬಹಳ ಮುಖ್ಯ’ ಎಂದೂ ಪಾಲಿಕೆ ಅಧಿಕಾರಿಗಳನ್ನು ಎಚ್ಚರಿಸಿದರು.

ಜಿಮ್ಸ್ ನಿರ್ದೇಶಕಿ ಡಾ.ಕವಿತಾ ಪಾಟೀಲ, ಇಎಸ್‌ಐ ನಿರ್ದೇಶಕಿ ಡಾ.ಇವೊನಾ ಲೋಬೋ, ಆರ್.ಸಿ.ಎಚ್‌ ಅಧಿಕಾರಿ ಡಾ.ಪ್ರಭುಲಿಂಗ ಮಾನಕರ್, ಜಿಲ್ಲಾ ಸಮನ್ವಯ ಸಮಾಲೋಚಕ ಕಾರ್ಣಿಕ ಕೋರೆ, ಸಹಾಯಕ ಘಟಕದ ಅಧಿಕಾರಿ ಗಣೇಶ ಚಿನ್ನಾಕರ, ಆರೋಗ್ಯ ಇಲಾಖೆ ಸಿಬ್ಬಂದಿ, ಪಾಲಿಕೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT