ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ | ವಸತಿ ನಿಲಯಗಳಲ್ಲಿ ಸಂವಿಧಾನ ಪೀಠಿಕೆ ವಾಚನ

Published 19 ಫೆಬ್ರುವರಿ 2024, 16:07 IST
Last Updated 19 ಫೆಬ್ರುವರಿ 2024, 16:07 IST
ಅಕ್ಷರ ಗಾತ್ರ

ಕಲಬುರಗಿ: ಸಂವಿಧಾನ ಜಾಗೃತಿ ಜಾಥಾ ಅಂಗವಾಗಿ ಭಾನುವಾರ ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಸತಿ ನಿಲಯಗಳಲ್ಲಿ ಸಂವಿಧಾನ ಪ್ರಸ್ತಾವನೆ ಓದಿನ ಜಾಗೃತಿ ನಡೆಯಿತು.

ಸಂವಿಧಾನ ಅಂಗೀಕಾರಗೊಂಡು 75 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಈಗಾಗಲೇ ಎರಡು ಸ್ತಬ್ಧಚಿತ್ರ ವಾಹನಗಳು ವಿವಿಧ ಹಳ್ಳಿ, ಪಟ್ಟಣದಲ್ಲಿ ಸಂಚರಿಸುತ್ತಾ ಸಂವಿಧಾನದ ಕುರಿತು ಜಾಗೃತಿ ಮೂಡಿಸುತ್ತಿದ್ದು, ಇತ್ತ ವಸತಿ ನಿಲಯದ ಮಕ್ಕಳಲ್ಲಿಯೂ ಸಹ ಸಂವಿಧಾನ ಕುರಿತು ತಿಳಿವಳಿಕೆಗೆ ವಿವಿಧ ಚಟುವಟಿಕೆಯ ಕಾರ್ಯಾಗಾರ ಆಯೋಜಿಸಲಾಗಿತ್ತು.

ನಗರದ ಸೇಡಂ ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮಹಿಳಾ ವಸತಿ ನಿಲಯಗಳ ಸಂಕೀರ್ಣದಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮತ್ತು ಸಂವಿಧಾನ ಪೀಠಿಕೆಗೆ ಪೂಜೆ ಸಲ್ಲಿಸುವ ಮೂಲಕ ಆರಂಭಿಸಲಾಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗುಲಬರ್ಗಾ ವಿಶ್ವವಿದ್ಯಾಲಯದ ನಿವೃತ್ತ ಉಪಕುಲಪತಿ ಡಾ.ವಿ.ಟಿ.ಕಾಂಬಳೆ, ಜ್ಞಾನಜ್ಯೋತಿ ಕೆರಿಯರ್ ಅಕಾಡೆಮಿಯ ಅಧ್ಯಕ್ಷ ಎನ್.ಎಸ್.ಹಿರೇಮಠ ಹಾಗೂ ವಕೀಲ ಸಾರಿಪುತ್ರ ಹೊಸಮನಿ ಅವರು ಸಂವಿಧಾನ ಕುರಿತು ಉಪನ್ಯಾಸ ನೀಡಿದರು. ನಂತರ ನಿಲಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಸತಿ ನಿಲಯದ ಮಕ್ಕಳು ಸಾಮೂಹಿಕವಾಗಿ ಸಂವಿಧಾನ ಪೀಠಿಕೆ ವಾಚನ ಮಾಡಿದರು.

ರಂಗೋಲಿಯಲ್ಲಿ ಅರಳಿದ ಅಂಬೇಡ್ಕರ್‌: ವಸತಿ ನಿಲಯದ ಮಕ್ಕಳು ನಿಲಯದ ನೆಲ ಹಾಸಿಗೆ ಮೇಲೆ ಬಣ್ಣ ಬಣ್ಣದ ರಂಗೋಲಿ ಬಿಡಿಸಿದರು. ಬಣ್ಣ-ಬಣ್ಣದ ರಂಗೋಲಿಯಲ್ಲಿ ಅಂಬೇಡ್ಕರ, ರಮಾಬಾಯಿ, ಸಂವಿಧಾನ ಪೀಠಿಕೆ ಚಿತ್ರ ಅನಾವರಣಗೊಂಡವು. ವಸತಿ ನಿಲಯದ ಮೇಲ್ವಿಚಾರಕರಾದ ಲಕ್ಷ್ಮೀ ಕೋರೆ, ಶಶಿಕಲಾ ಪೂಜಾರಿ, ಗಂಗಮ್ಮ ಬಂಡೆನವರು, ಸೈದಾ ಬೇಗಂ ಭಾಗವಾನ್ ಸೇರಿದಂತೆ ಸುಮಾರು 1200 ಮಕ್ಕಳು ಭಾಗವಹಿಸಿದ್ದರು.

ನಗರದ ರಾಜಾಪುರ ರಸ್ತೆಯ ಬಾಲಕರ ವಸತಿ ನಿಲಯ ಸಂಕೀರ್ಣ, ನಂ-5 ಬಾಲಕಿಯರ ವಸತಿ ನಿಲಯ, ವಿದ್ಯಾನಗರ ಬಾಲಕಿಯರ ವಸತಿ ನಿಲಯ, ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯ ಕಲಬುರಗಿ ಟೌನ್, ಎಂಜಿನಿಯರಿಂಗ್ ಬಾಲಕರ ವಸತಿ ನಿಲಯ, ಅಫಜಲಪೂರ ತಾಲ್ಲೂಕಿನ ಮಣ್ಣೂರ ಬಾಲಕರ ಪೋಸ್ಟ್‌ ಮೆಟ್ರಿಕ್, ಘತ್ತರಗಾ ಪ್ರಿ ಮೆಟ್ರಿಕ್, ಆಳಂದ ಪಟ್ಟಣದ ಬಾಲಕಿಯರ ಪ್ರಿ ಮತ್ತು ಪೋಸ್ಟ್‌ ಮೆಟ್ರಿಕ್, ಕಡಗಂಚಿ, ಕಮಲನಗರ ವಸತಿ ನಿಲಯ, ಚಿತ್ತಾಪುರ ತಾಲ್ಲೂಕಿನ ಗುಂಡಗುರ್ತಿ, ಭಂಕೂರ, ವಾಡಿ ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಅಂಬೇಡ್ಕರ ವಸತಿ ಶಾಲೆ, ಚಿಂಚೋಳಿ ತಾಲ್ಲೂಕಿನ ಕುಂಚಾವರಂ ಹೀಗೆ ಎಲ್ಲೆಡೆ ಕಾರ್ಯಾಗಾರ ಅರ್ಥಪೂರ್ಣವಾಗಿ ನಡೆಯಿತು. ರಾಷ್ಟ್ರ ನಾಯಕರ ವೇಶ ಧರಿಸಿ ಮಕ್ಕಳು ಗಮನ ಸೆಳೆದರು.

300ಕ್ಕೂ ಹೆಚ್ಚು ವಸತಿ ನಿಲಯದಲ್ಲಿ ಕಾರ್ಯಾಗಾರ: ಜಿಲ್ಲೆಯಾದ್ಯಂತ ಭಾನುವಾರ ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧೀನದ ಸುಮಾರು 300 ಕ್ಕೂ ಹೆಚ್ಚು ಮೆಟ್ರಿಕ್ ಪೂರ್ವ-ಮೆಟ್ರಿಕ ನಂತರ ವಸತಿ ನಿಲಯ, ವಸತಿ ಶಾಲೆಯಲ್ಲಿ ನಡೆದ ಸಂವಿಧಾನ ಕುರಿತು ಕಾರ್ಯಾಗಾರದಲ್ಲಿ ಪೀಠಿಕೆ ವಾಚನ, ಉಪನ್ಯಾಸ, ಚಿತ್ರಕಲೆ, ರಂಗೋಲಿ, ಭಾಷಣ ಸ್ಪರ್ಧೆಯಲ್ಲಿ ಮಕ್ಕಳು ಸಕ್ರಿಯವಾಗಿ ಭಾಗವಹಿಸಿದ್ದರು ಎಂದು ಸಮಾಜ ಕಲ್ಯಾಣ ಇಲಾಖೆಯ ಪ್ರಭಾರಿ ಜಂಟಿ ನಿರ್ದೇಶಕ ಜಾವೀದ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT