ಚಿತ್ತಾಪುರ: ‘ಕುರುಬ ಜಾತಿಯನ್ನು ಕೇವಲ ರಾಜಕೀಯಕ್ಕೆ ಮಾತ್ರ ಉಪಯೋಗಿಸಿಕೊಳ್ಳಬೇಡಿ. ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ಔದ್ಯೋಗಿಕ, ಆರ್ಥಿಕವಾಗಿಯೂ ಪರಿಗಣಿಸಬೇಕು. ಗೊಂಡ ಪರ್ಯಾಯ ಪದವಾಗಿ ಕುರುಬ ಜಾತಿಯನ್ನು ಪರಿಗಣಿಸಿ ಪರಿಶಿಷ್ಟ ಪಂಗಡ ಸೌಲಭ್ಯ ನೀಡಬೇಕು’ ಎಂದು ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ-ತಿಂಥಣಿ ಬ್ರಿಜ್ ಸಿದ್ಧರಾಮಾನಂದ ಸ್ವಾಮಿಜೀ ಒತ್ತಾಯಿಸಿದರು.
ಪಟ್ಟಣದಲ್ಲಿ ಕರ್ನಾಟಕ ಪ್ರದೇಶ ಗೊಂಡ ಕುರುಬ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಹೊಸಳ್ಳಿ ಅವರ ನೇತೃತ್ವದಲ್ಲಿ ‘ಗೊಂಡ ಪರ್ಯಾಯ ಪದ ಕುರುಬ’ ಎಂದು ಪರಿಗಣಿಸಬೇಕು ಎಂದು ಒತ್ತಾಯಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
‘ಕುರುಬ ಜಾತಿ ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿ 1996ರಿಂದ ರಿಂದ ಹೋರಾಟ ನಡೆಯುತ್ತಿದೆ. ಕೇಂದ್ರ ಸರ್ಕಾರದ ನಡೆ ಪ್ರಜಾಪ್ರಭುತ್ವಕ್ಕೆ ಮಾಡಿದ ದ್ರೋಹ. ಮೀಸಲಾತಿ ಹೊಸದಾಗಿ ಕೇಳುತ್ತಿಲ್ಲ. ಕೆಲಸ ಮಾಡದವರನ್ನು ಅಧಿಕಾರದಿಂದ ಇಳಿಸುವುದು ಕುರುಬರಿಗೆ ಗೊತ್ತಿದೆ’ ಎಂದು ಆಕ್ರೋಶ ವ್ಯಕ್ತಡಿಸಿದರು.
ಗೊಂಡ ಕುರುಬ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಗನ್ನಾಥ ಪೂಜಾರಿ ಮಾತನಾಡಿ, ‘ರಾಜ್ಯ ಬಿಜೆಪಿಯವರು ಗೊಂಡ ಪರ್ಯಾಯ ಪದವಾಗಿ ಕುರುಬ ಪರಿಗಣಿಸಿ ಕುರುಬ ಜಾತಿಗೆ ಪರಿಶಿಷ್ಟ ಪಂಗಡ ಸೌಲಭ್ಯ ನೀಡುವಂತೆ ಕೇಂದ್ರದ ಮೇಲೆ ಒತ್ತಡ ಹೇರಬೇಕು’ ಎಂದು ಆಗ್ರಹಿಸಿದರು.
ಪಟ್ಟಣದ ಕನಕ ಭವನದಿಂದ ಪ್ರಮುಖ ಬೀದಿಗಳು ಮೂಲಕ ಕುರಿಗಳೊಂದಿಗೆ ತಹಶೀಲ್ದಾರ್ ಕಚೇರಿಯವರೆಗೆ ಪ್ರತಿಭಟನೆ ಮೆರವಣಿಗೆ ಮಾಡಲಾಯಿತು.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಬರೆದಿರುವ ಮನವಿ ಪತ್ರವನ್ನು ತಹಶೀಲ್ದಾರ್ ಸೈಯದ್ ಷಾಷಾವಲಿ ಅವರಿಗೆ ಸಲ್ಲಿಸಿದರು.
ತಿಂಥಣಿ ಪೀಠದ ಬೀರಲಿಂಗ ದೇವರು, ಸಂಘದ ರಾಜ್ಯಾಧ್ಯಕ್ಷ ಭಗವಂತರಾವ ಪಾಟೀಲ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಪೂಜಾರಿ, ಮುಖಂಡರಾದ ಮಹಾಂತೇಶ ಕೌಲಗಿ, ಜುಮ್ಮಣ್ಣ ಪೂಜಾರಿ, ಮಲ್ಲಿಕಾರ್ಜುನ ಪೂಜಾರಿ ಮೊಗಲಾ, ಪ್ರಭು ಗಂಗಾಣಿ, ಮಲಕಣ್ಣ ಮುದ್ದಾ, ಲಿಂಗಣ್ಣ ಪೂಜಾರಿ, ಯಲ್ಲಾಲಿಂಗ ಪೂಜಾರಿ ಇವಣಿ, ಮಲ್ಲಿಕಾರ್ಜುನ ಡಬ್ಬಗೇರಾ, ಹಣಮಂತರಾಯ ಪೂಜಾರಿ, ಮಲ್ಲಿಕಾರ್ಜುನ ಪೂಜಾರಿ ಮರಗೋಳ, ಬಸವರಾಜ ಪೂಜಾರಿ ಮೊಗಲಾ, ಸಂತೋಷ ಪೂಜಾರಿ, ತಿಪ್ಪಣ್ಣ ವಗ್ಗರ್ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.