ಚಿಂಚೋಳಿ: ‘ಪಿಎಸ್ಐ ಅಕ್ರಮಕ್ಕೆ ಸಂಬಂಧಿಸಿದಂತೆ ತಮ್ಮ ಬಳಿ ದಾಖಲೆಗಳಿವೆ ಎಂದಿರುವ ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಅವರು ಸಿಐಡಿಗೆ ಒಪ್ಪಿಸಿ, ತನಿಖೆಗೆ ಸಹಕರಿಸಬೇಕಿತ್ತು. ಆದರೆ, ಅವರು ಬೆನ್ನು ತೋರಿಸುತ್ತಿರುವುದನ್ನು ನೋಡಿದರೆ ಅವರ ಬಳಿ ಯಾವುದೇ ದಾಖಲೆಗಳಿಲ್ಲ ಎಂಬುದು ಸ್ಪಷ್ಟವಾಗುತ್ತದೆ’ ಎಂದು ಬಿಜೆಪಿ ವಕ್ತಾರ ರಾಜಕುಮಾರ ಪಾಟೀಲ ತೆಲ್ಕೂರು ಲೇವಡಿ ಮಾಡಿದರು.
ಸುಲೇಪೇಟದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಿಐಡಿ ಅಧಿಕಾರಿಗಳ ತಂಡವು ಅವರನ್ನು ಆರೋಪಿ ಎಂದು ನೋಟೀಸ್ ನೀಡಿಲ್ಲ. ಹೀಗಾಗಿ ಅವರನ್ನು ಬಂಧಿಸಲಾಗದು. ಆದರೆ, ತಮ್ಮ ಬಳಿಯಿರುವ ದಾಖಲೆ ಎಲ್ಲಿಂದಾರೂ ಸಂಗ್ರಹಿಸಿ, ಅವುಗಳು ಸಿಐಡಿಗೆ ಹಸ್ತಾಂತರಿಸಿ ತನಿಖೆಗೆ ಸಹಕರಿಸಬೇಕು. ನಾನು ನೋಟೀಸಿಗೆ ಜಗ್ಗುವುದಿಲ್ಲ ಎಂಬ ಉಡಾಫೆ ಹೇಳಿಕೆ ಅವರ ಘನತೆಗೆ ತಕ್ಕುದ್ದಲ್ಲ’ ಎಂದರು.
ಪ್ರಿಯಾಂಕ್ ದಾಖಲೆ ಒದಗಿಸಲು ವಿಫಲವಾದರೆ, ರಾಜ್ಯ ಜನರ ಕ್ಷಮೆ ಕೇಳಬೇಕು ಎಂದು ಅವರು ಆಗ್ರಹಿಸಿದರು.
‘ಆರ್.ಡಿ.ಪಾಟೀಲ ಕೋಟ್ಯಂತರ ರೂಪಾಯಿ ಸಂಪಾದಿಸಿದ್ದು, ಅವರು ಏನೇನು ಮಾಡಿ ಹಣ ಸಂಪಾದಿಸಿದ್ದಾರೆ ಎಂಬುದು ತನಿಖೆ ನಡೆಸಬೇಕು. ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು. ಅಕ್ರಮ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು’ ಎಂದರು.
ನಾನು ಸನ್ಯಾಸಿಯಲ್ಲ: ಸಂಪುಟ ಪುನರ್ ರಚನೆಯಾದರೆ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದೇನೆ. ನಾನು ಸನ್ಯಾಸಿಯಲ್ಲ ಎಂದರು.
ಎಂಜಿನಿಯರ್ ಡಿಸಿ ಕಚೇರಿ ಎದುರು ಗುತ್ತಿಗೆದಾರರಿಂದ ಹಣ ಪಡೆದಿರುವುದನ್ನು ಉಲ್ಲೇಖಿಸಿ, ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಅಧಿಕಾರಿಗಳಿಗೆ ಭಯವೇ ಇಲ್ಲದಂತಾಗಿದೆ ಎಂದು ಪ್ರಿಯಾಂಕ್ ಆರೋಪಕ್ಕೆ ಉತ್ತರಿಸಿದ ಅವರು, ‘ಎಲ್ಲರೂ ಗಾಜಿನ ಮನೆಯಲ್ಲೇ ಕೂತು ಕಲ್ಲು ಹೊಡೆಯುತ್ತಿದ್ದಾರೆ. ಯಾರು ಐಶಾರಾಮಿ ಬಂಗ್ಲಾ ಹೇಗೆ ನಿರ್ಮಿಸಿದರು? ಅವರು ವಾಸವಿರುವ ಪ್ರದೇಶದ ಆಸ್ತಿ ಮೌಲ್ಯ ಏನು? ಅವರು ಬೆವರು ಸುರಿಸಿ ಗಳಿಸಿಲ್ಲ. ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ಆದರೆ ಹಣ ಪಡೆದ ವಿಷಯ ನನಗೆ ಗೊತ್ತಿಲ್ಲ. ಅಧಿಕಾರಿಗಳಿಂದ ಮಾಹಿತಿ ಪಡೆಯುವೆ’ ಎಂದರು.