ಕಲಬುರ್ಗಿ: ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ಪತ್ನಿ ರಮಾಬಾಯಿ ಅಂಬೇಡ್ಕರ್ ವಿಶ್ವ ಕಂಡ ತ್ಯಾಗಮಯಿ ಮಹಾಮಾತೆ ಮತ್ತು ಶೋಷಿತ ಜನಾಂಗದ ಶಿಕ್ಷಣಕ್ಕೆ ಬೆಳಕಾದವರು ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಎಂದು ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅಭಿಪ್ರಾಯಪಟ್ಟರು.
ನಗರದ ಕಲಾ ಮಂಡಳದಲ್ಲಿ ಕರ್ನಾಟಕ ಸಮತಾ ಸೈನಿಕ ದಳ ಹಾಗೂ ಮಹಿಳಾ ಘಟಕದ ಆಶ್ರಯದಲ್ಲಿ ಆಯೋಜಿಸಿದ್ದ ರಮಾಬಾಯಿ ಅಂಬೇಡ್ಕರ್ ಹಾಗೂ ಸಾವಿತ್ರಿಬಾಯಿ ಫೂಲೆ ಅವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರೊ.ಯಶವಂತರಾಯ ಅಷ್ಠಗಿ ಮಾತನಾಡಿ, ಸಾಮಾನ್ಯರಲ್ಲಿ ಸಾಮಾನ್ಯನಾಗಿದ್ದ ಭೀಮನನ್ನು, ಬಾಬಾ ಸಾಹೇಬ್ ಡಾ. ಭೀಮರಾವ ಅಂಬೇಡ್ಕರ್ ಮಾಡಿದ ಶ್ರೇಯಸ್ಸು ಮತ್ತು ಕೀರ್ತಿ ಮಾತೆ ರಮಾಬಾಯಿ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದರು.
ದಲಿತ ಮುಖಂಡ ಹಣಮಂತ ಬೋಧನಕರ್, ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯೆ ಗೀತಾ ರಾಜು ವಾಡೇಕರ್, ಕರ್ನಾಟಕ ಸಮತಾ ಸೈನಿಕ ದಳದ ವಿಭಾಗೀಯ ಅಧ್ಯಕ್ಷ ಸಂಜೀವ ಟಿ. ಮಾಲೆ, ಪ್ರೇಮಕುಮಾರ ಬುದ್ಧನಾಳಕರ್, ಶಂಕರ್ ಫಿರಂಗೆ, ಲತಾ ರವಿ ರಾಠೋಡ ಮಾತನಾಡಿದರು. ತುಕಾರಾಮ ವರ್ಮಾ ಸ್ವಾಗತಿಸಿದರು. ಎಂ.ಎನ್. ಸುಗಂಧಿ ನಿರೂಪಿಸಿದರು. ಧರ್ಮಣ್ಣ ಧನ್ನಿ ವಂದಿಸಿದರು.