ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಯುಕೆ ಕಲಹಕ್ಕೆ ಹೊಸ ತಿರುವು: ಅಧಿಕಾರ ವಹಿಸಿಕೊಂಡ ಹಂಗಾಮಿ ಕುಲಸಚಿವ

ಪೊಲೀಸ್‌ ಠಾಣೆ ಮೆಟ್ಟಿಲೇರಿದ ಪಟೇಲ್‌
Last Updated 22 ಜನವರಿ 2021, 15:47 IST
ಅಕ್ಷರ ಗಾತ್ರ

ಕಲಬುರ್ಗಿ: ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಮುಷ್ತಾಕ್ ಅಹ್ಮದ್ ಐ. ಪಟೇಲ್ ಅವರು, ತಮ್ಮನ್ನು ಮಾತೃ ವಿಶ್ವವಿದ್ಯಾಲಯಕ್ಕೆ ಕಳಿಸುವ ಹಂಗಾಮಿ ಕುಲಪತಿ ಕ್ರಮವನ್ನು ಪ್ರತಿಭಟಿಸಿ ಅಧಿಕಾರ ಹಸ್ತಾಂತರಿಸಲು ನಿರಾಕರಿಸಿದ್ದರೂ, ಹಂಗಾಮಿ ಕುಲಸಚಿವರಾಗಿ ಬಸವರಾಜ ಡೋಣೂರ ಅಧಿಕಾರ ವಹಿಸಿಕೊಂಡಿದ್ದಾರೆ.

ಏತನ್ಮಧ್ಯೆ, ಪಟೇಲ್‌ ಅವರು ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದು, ‘ಹಂಗಾಮಿ ಕುಲಪತಿ ಪ್ರೊ.ಎಂ.ವಿ. ಅಳಗವಾಡಿ ಅವರು ನಿಯಮಬಾಹಿರವಾಗಿ ನನ್ನನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿದ್ದಾರೆ. ಪೂರ್ಣಾವಾಧಿ ಕುಲಸಚಿವ ಹುದ್ದೆಯ ಅವಧಿ ಐದು ವರ್ಷಗಳಿದ್ದು, ಅವಧಿ ಮುಗಿಯುವ ಮುನ್ನವೇ ಈ ನಿರ್ಧಾರ ಕೈಗೊಂಡಿದ್ದಾರೆ. ಜೊತೆಗೆ, ಕೆಲ ಪ್ರಾಧ್ಯಾಪಕರನ್ನು ಕಳಿಸಿ ಮಾನಸಿಕ ಹಿಂಸೆ ನೀಡುವ ಮೂಲಕ ನನ್ನ ಕರ್ತವ್ಯಕ್ಕೆ ಅಡ್ಡಿಯುಂಟು ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ನನಗೆ ಭದ್ರತೆ ನೀಡಬೇಕು’ ಎಂದು ನರೋಣಾ ಪೊಲೀಸರಿಗೆ ದೂರು ನೀಡಿದ್ದಾರೆ.

‘ಪಟೇಲ್‌ ಅವರು ದೂರಿನಲ್ಲಿ ಉಲ್ಲೇಖಿಸಿರುವ ಅಂಶಗಳು ನಮ್ಮ ಕಾರ್ಯವ್ಯಾಪ್ತಿಗೆ ಬರುವುದಿಲ್ಲ ಎಂಬ ಕಾರಣಕ್ಕೆ ಪ್ರಕರಣ ದಾಖಲಿಸಿಕೊಂಡಿಲ್ಲ. ಆದರೂ, ನಾವು ಕುಲಪತಿ ಅವರನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಂಡಿದ್ದೇವೆ’ ಎಂದು ಪೊಲೀಸರು ತಿಳಿಸಿದ್ದಾರೆ.

ನ್ಯಾಯಾಲಯಕ್ಕೆ ಹೋಗಲಿ: ‘ಪಟೇಲ್ ಅವರಿಗೆ ಅನ್ಯಾಯವಾಗಿದ್ದರೆ ನ್ಯಾಯಾಲಯಕ್ಕೆ ಹೋಗಬಹುದಾಗಿದೆ. ನನ್ನ ಅಧಿಕಾರ ಬಳಸಿ ಅವರನ್ನು ಕುಲಸಚಿವ ಹುದ್ದೆಯಿಂದ ಬಿಡುಗಡೆ ಮಾಡಿ, ಅವರು ಪ್ರಾಧ್ಯಾಪಕರಾಗಿರುವ ಮೌಲಾನಾ ಆಜಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯಕ್ಕೆ ತೆರಳುವಂತೆ ತಿಳಿಸಿದ್ದೇನೆ. ಇದೇ 29ರಂದು ವಿ.ವಿ.ಯ ಕಾರ್ಯಕಾರಿ ಮಂಡಳಿ (ಇ.ಸಿ.) ಸಭೆ ಕರೆದಿದ್ದು, ಕುಲಸಚಿವರನ್ನು ಬಿಡುಗಡೆಗೊಳಿಸಿದ್ದಕ್ಕೆ ಒಪ್ಪಿಗೆ ಪಡೆಯಲಿದ್ದೇನೆ’ ಎಂದು ಅಳಗವಾಡಿ ಪ್ರತಿಕ್ರಿಯಿಸಿದರು.

‘ಸೇವಾ ಹಿರಿತನ ಕಡೆಗಣನೆ’

‘ವಿಶ್ವವಿದ್ಯಾಲಯದಲ್ಲಿ ನಾನು ಸೇವಾ ಹಿರಿತನ ಹೊಂದಿದ್ದು, ಇದನ್ನು ಕಡೆಗಣಿಸಿಬಸವರಾಜ ಡೋಣೂರ ಅವರನ್ನೇಏಕೆ ಕುಲಸಚಿವರನ್ನಾಗಿ ನೇಮಕ ಮಾಡಿದ್ದೀರಿ’ ಎಂದು ಪ್ರಶ್ನಿಸಿ ಕನ್ನಡ ವಿಭಾಗದ ಪ್ರಾಧ್ಯಾಪಕಿ ಪ್ರೊ.ಶಿವಗಂಗಾ ರುಮ್ಮಾ ಅವರು ಹಂಗಾಮಿ ಕುಲಪತಿಗೆ ಪತ್ರ ಬರೆದಿದ್ದಾರೆ.

‘ಹಿಂದಿನ ಕುಲಪತಿ ಪ್ರೊ. ಮಹೇಶ್ವರಯ್ಯ ಅವರು ಪ್ರೊ.ರೊಮಾಟೆ ಜಾನ್ ಅವರನ್ನು ಹಂಗಾಮಿ ಕುಲಪತಿಯನ್ನಾಗಿ ನೇಮಿಸಿದಾಗ ನೀವೇ ಅದನ್ನು ಪ್ರಶ್ನಿಸಿ ಹಿರಿತನದ ಆಧಾರದ ಮೇಲೆ ಕುಲಪತಿ ನೇಮಕವಾಗಿಲ್ಲ ಎಂದು ತಕರಾರು ಮಾಡಿ ಅಧಿಕಾರ ವಹಿಸಿಕೊಂಡಿದ್ದೀರಿ. ಆ ನಿಯಮ ನನ್ನ ವಿಷಯದಲ್ಲಿ ಪಾಲಿಸಲು ನಿಮಗೆ ಏನು ಸಮಸ್ಯೆ’ ಎಂದು ಪತ್ರದಲ್ಲಿ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT