ಸೇಡಂ (ಕಲಬುರ್ಗಿ ಜಿಲ್ಲೆ): ಕೌಟುಂಬಿಕ ಕಲಹದಿಂದ ರೋಸಿ ಹೋಗಿ ವ್ಯಕ್ತಿಯು ಪತ್ನಿ ಮತ್ತು ಮಗಳನ್ನು ಕೊಲೆ ಮಾಡಿದ ಘಟನೆ ಪಟ್ಟಣದ ವಿಶ್ವನಗರ ಬಡಾವಣೆಯಲ್ಲಿ ಬುಧವಾರ ಮಧ್ಯರಾತ್ರಿ ನಡೆದಿದೆ.
ವಿಶ್ವನಗರದ ನಿವಾಸಿ ಜಗದೇವಿ (37), ಮತ್ತು ಪ್ರಿಯಾಂಕಾ (11) ಮೃತರು. ಹಣಮಂತ (47) ಕೊಲೆ ಆರೋಪಿಯಾಗಿದ್ದು, ಪೊಲೀಸರಿಗೆ ಶರಣಾಗಿದ್ದಾನೆ. ಕೃತ್ಯ ತಾನೇ ಮಾಡಿರುವುದಾಗಿ ಒಪ್ಪಿದ್ದಾನೆ ಎಂದು ಸೇಡಂ ಠಾಣೆ ಪೊಲೀಸರು ತಿಳಿಸಿದ್ದಾರೆ.
ಹಣಮಂತ ಹಲವು ವರ್ಷಗಳಿಂದ ಪಟ್ಟಣದಲ್ಲಿ ಪಾನಿಪುರಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.