ಕಲಬುರ್ಗಿ: ‘ಜಿಲ್ಲೆಯಲ್ಲಿ ಕೋವಿಡ್ನಿಂದ ಸಂಭವಿಸುತ್ತಿರುವ ಸಾವುಗಳನ್ನು ತಡೆಯಲು ಜಿಮ್ಸ್ನಲ್ಲಿ ಶೀಘ್ರವೇ ಪ್ಲಾಸ್ಮಾ ಚಿಕಿತ್ಸೆಗೆ ಆರಂಭಿಸಬೇಕು’ ಎಂದು ಶಾಸಕ ಡಾ.ಅಜಯಸಿಂಗ್ ಆಗ್ರಹಿಸಿದರು.
ಇಲ್ಲಿನ ಜಿಮ್ಸ್ ಆಸ್ಪತ್ರೆಯ ಕೋವಿಡ್ ವಾರ್ಡ್ಗಳಿಗೆ ಶನಿವಾರ ಭೇಟಿ ನೀಡಿದ ಅವರು, ಸೋಂಕಿತರ ಆರೋಗ್ಯ ವಿಚಾರಿಸಿದರು. ನಂತರ ಮಾಧ್ಯಮದವರಿಗೆ ಮಾಹಿತಿ ನೀಡಿದರು.
‘ಪ್ಲಾಸ್ಮಾ ತೆರಫಿ ಆರಂಭಿಸುವ ಉದ್ದೇಶಕ್ಕೆ ಕೆಕೆಆರ್ಡಿಬಿಯಿಂದ ₹ 40 ಲಕ್ಷ ಅನುದಾನವನ್ನು ಕಳೆದ ವರ್ಷವೇ ಜಿಮ್ಸ್ಗೆ ನೀಡಲಾಗಿದೆ. ಅದನ್ನು ಈವರೆಗೂ ಅದನ್ನು ಬಳಸದೇ ಇರಲು ಕಾರಣವೇನು?’ ಎಂದು ಪ್ರಶ್ನಿಸಿದರು.
‘ಈ ಬಗ್ಗೆ ಜಿಮ್ಸ್ ನಿರ್ದೇಶಕಿ ಡಾ.ಕವಿತಾ ಪಾಟೀಲ ಅವರೊಂದಿಗೂ ಚರ್ಚಿಸಿದ್ದೇನೆ. ಅವರು ಪ್ಲಾಸ್ಮಾ ತೆರಫಿ ಆರಂಭಕ್ಕೆ ಸೂಕ್ತ ಮಾರ್ಗಸೂಚಿ ಇನ್ನೂ ಇಲ್ಲವೆಂದು ಹೇಳಿದ್ದಾರೆ. ಅದಕ್ಕೆ ಏನೆಲ್ಲಾ ಸಿದ್ಧತೆಗಳು ಬೇಕೋ ಮಾಡಿಕೊಂಡು ಚಿಕಿತ್ಸಾ ವಿಧಾನ ಇಲ್ಲಿ ಬೇಗ ಆರಂಭಿಸಲಿ’ ಎಂದೂ ಆಗ್ರಹಿಸಿದರ.
‘ಕೋವಿಡ್ ಕೇರ್ ಸೆಂಟರ್ನ ವೈದ್ಯರ ತಂಡದೊಂದಿಗೆ ಮಾತುಕತೆ ನಡೆಸಿದ್ದೇನೆ. ಅಲ್ಲಿ ನೀಡುತ್ತಿರುವ ಚಿಕಿತ್ಸೆ, ಔಷಧ ಲಭ್ಯತೆ, ಆಮ್ಲಜನಕ ಪೂರೈಕೆ ಇತ್ಯಾದಿ ವಿಷಯಗಳ ಮಾಹಿತಿ ಪಡೆದುಕೊಂಡಿದ್ದೇನೆ. ಇನ್ನೂ ಹೆಚ್ಚಿನ ಸಿಬ್ಬಂದಿ ಅಲ್ಲಿ ನಿಯೋಜಿಸುವ ಅಗತ್ಯವಿದೆ’ ಎಂದರು.
‘404 ಬೆಡ್ಗಳ ಜಿಮ್ಸ್ನ ಕೋವಿಡ್ ಆಸ್ಪತ್ರೆಯಲ್ಲಿ 40 ವೆಂಟಿಲೇಟರ್ಗಳಿವೆ. ಆದರೆ, ಇಲ್ಲಿ ಸ್ಟಾಫ್ ನರ್ಸ್, ಡಿ ವರ್ಗದ ಸಿಬ್ಬಂದಿ ಕೊರತೆ ಕಾಡುತ್ತಿದೆ.
90 ಮಂದಿ ಡಿ ಗ್ರೂಪ್ ಸಿಬ್ಬಂದಿ ನೇಮಕವಾಗಿದೆ. ಅವರು ಇನ್ನೂ ಕೆಲಸಕ್ಕೆ ಬಂದಿಲ್ಲವೆಂಬ ಮಾಹಿತಿ ದೊರಕಿದೆ. ಜಿಲ್ಲಾಧಿಕಾರಿಗಳು ಈ ಪ್ರಕ್ರಿಯೆಗಳನ್ನು ಶೀಘ್ರ ಮುಗಿಸಬೇಕು’ ಎಂದೂ ನಿರ್ದೇಶನ ನೀಡಿದರು.
‘ಜಿಲ್ಲೆಯಲ್ಲಿ ಈ ವಾರ ಸೋಂಕಿನ ಪ್ರಮಾಣ ಶೇ 22.68 ಹಾಗೂ ಸಾವಿನ ಪ್ರಮಾಣ ಶೇ. 0.98ಕ್ಕೆ ತಲುಪಿದೆ. ಇದು ಆತಂಕದ ಸಂಗತಿ. ಯಾವುದೇ ಸಂದರ್ಭದಲ್ಲೂ ಕೊರೊನಾ ಸ್ಫೋಟಗೊಳ್ಳಬಹುದು. ಆದ್ದರಿಂದ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು’ ಎಂದೂ ಆಗ್ರಹಿಸಿದರು.