ಕಲಬುರಗಿ: ‘ಕೋಟ್ಯಂತರ ಜನರ ಹಸಿವು ನೀಗಿಸುವ ಅನ್ನದಾತರ ಸಂಕಷ್ಟಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅರಿವಿಲ್ಲ. ಜನರಿಗೆ ಐದು ಗ್ಯಾರಂಟಿ ಕೊಡುತ್ತಿರುವ ಸಿದ್ದರಾಮಯ್ಯ ರಾಜ್ಯದ ರೈತರಿಗೆ ಯಾವುದೇ ಗ್ಯಾರಂಟಿ ನೀಡುತ್ತಿಲ್ಲ. ಇರುವ ಸೌಲಭ್ಯಗಳನ್ನು ರದ್ದು ಮಾಡಿದ್ದಾರೆ’ ಎಂದು ಕಲ್ಯಾಣ ಕರ್ನಾಟಕ ರೈತ ಪರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಬಿ.ನಾಯಕ ಟೀಕಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು, ‘ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಗ್ಯಾರಂಟಿ ಜಾರಿ ಮಾಡಿದ್ದಾಗಿ ಮುಖ್ಯಮಂತ್ರಿ ಜಂಭದಿಂದ ಹೇಳುತ್ತಾರೆ. ಅವರೇನು ಸ್ವಂತ ಹಣದಿಂದ ಗ್ಯಾರಂಟಿಗೆ ಹಣ ಕೊಡುತ್ತಿದ್ದಾರಾ? ಗ್ಯಾರಂಟಿ ನೀಡುವಂತೆ ಜನರು ಕೇಳಿದ್ದಾರೇನು’ ಎಂದು ಪ್ರಶ್ನಿಸಿದರು.
‘ಕೂಡಲೇ ಸರ್ಕಾರ ಬರ ಪರಿಹಾರದ ಕ್ರಮವಾಗಿ ಪ್ರತಿ ಎಕರೆಗೆ ₹ 20 ಸಾವಿರ ರೈತರ ಖಾತೆಗೆ ಜಮೆ ಮಾಡಬೇಕು. ಈ ಹಿಂದಿನ ರಾಜ್ಯ ಸರ್ಕಾರ ರೈತರಿಗೆ ನೀಡುತ್ತಿದ್ದ ಕಿಸಾನ್ ಸಮ್ಮಾನ್ ನಿಧಿ ₹ 4 ಸಾವಿರ ಮತ್ತೆ ಜಮೆ ಮಾಡಬೇಕು. ಬರಗಾಲದ ಹಿನ್ನೆಲೆಯಲ್ಲಿ ಸಾಲ ಮನ್ನಾ ಮಾಡಬೇಕು’ ಎಂದು ಆಗ್ರಹಿಸಿದರು.
‘ರೈತರಿಗೆ ಹಗಲಿನಲ್ಲಿ 10 ತಾಸು ವಿದ್ಯುತ್ ಪೂರೈಸಬೇಕು. ಪಹಣಿ ಪತ್ರ ಪಡೆಯಲು ಹಿಂದೆ ಇದ್ದ ದರವನ್ನು ಸಿದ್ದರಾಮಯ್ಯ ಅವರ ಸರ್ಕಾರ ₹ 25 ಹೆಚ್ಚಿಸಿದ್ದನ್ನು ಕೈಬಿಡಬೇಕು. 60 ವರ್ಷ ದಾಟಿದ ರೈತರಿಗೆ ಪ್ರತಿ ತಿಂಗಳು ₹ 3 ಸಾವಿರ ಮಾಸಾಶನ ಕೊಡಬೇಕು. ಗ್ರಾಮ ಪಂಚಾಯಿತಿಗೊಂದು ಗೋಶಾಲೆ ತೆರೆಯಬೇಕು’ ಎಂಬುದು ಸೇರಿದಂತೆ 11 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಆದಿನಾಥ ಹೀರಾ, ನಾಗಮ್ಮ ದೇಸಾಯಿ, ಅರುಣಕುಮಾರ ಪಾಟೀಲ, ಯುಗಾಂತ್ರಿ ಬೆಳಕೋಟಾ, ಹೀರಾಮಣಿ ರಾಠೋಡ, ಶ್ರೀಮಂತ ಪಾಟೀಲ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.