ಕಲಬುರಗಿ: ‘ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವವನ್ನು ಮೈಗೂಡಿಸಿಕೊಂಡು ವಿಜ್ಞಾನದ ಬೆಳವಣಿಗೆಗೆ ಮಹತ್ವದ ಕೊಡುಗೆಯನ್ನು ನೀಡಿ’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ ಕರೆ ನೀಡಿದರು.
ಶ್ರೀ ವಿದ್ಯಾ ಮಹಿಳಾ ಪದವಿ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಸಂಘಟಿಸಿದ್ದ ವಿಶ್ವವಿದ್ಯಾಲಯ ಮಟ್ಟದ ಕನ್ನಡ ವಿಜ್ಞಾನ ಉಪನ್ಯಾಸ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತನ ನೂತನ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ‘ವಿಜ್ಞಾನ ಮತ್ತು ಸಾಹಿತ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ನಾಡಿನಾದ್ಯಂತ ವಿಜ್ಞಾನದ ಬೆಳವಣಿಗೆ ಕನ್ನಡ ಸಾಹಿತ್ಯ ಪರಿಷತ್ತು ಅದರ ಜೊತೆಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ’ ಎಂದು ಹೇಳಿದರು.
ಕರಾವಿಪದ ರಾಜ್ಯ ಸಂಯೋಜಕ ಎಚ್.ಎಸ್.ಟಿ. ಸ್ವಾಮಿ ಮಾತನಾಡಿ, ‘ವಿಜ್ಞಾನವನ್ನು ಮಾತೃಭಾಷೆಯ ಮೂಲಕ ಜನಸಾಮಾನ್ಯರಿಗೆ ತಲುಪಿಸುವ ಕೆಲಸವಾಗಬೇಕು. ಜನರಲ್ಲಿನ ಕಂದಾಚಾರಗಳನ್ನು ಹೋಗಲಾಡಿಸಲು ವಿಜ್ಞಾನದ ಪಾತ್ರ ಮಹತ್ವವಾದದು’ ಎಂದು ತಿಳಿಸಿದರು.
ಅದ್ಯಕ್ಷತೆಯನ್ನು ಪರಿಷತ್ತಿನ ರಾಜ್ಯ ಅಧ್ಯಕ್ಷ ಗಿರೀಶ ಕಡ್ಲೇವಾಡ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಡಾ. ಕವಿರಾಜ ಪಾಟೀಲ, ವಿ.ವಿ. ಸಂಯೋಜ ಸುನಿಲ್ ಕುಮಾರ್ ಬೀಡೆ, ಡಾ.ಶಾಮಸುಂದರ್, ಡಾ. ಮಂಜುನಾಥ ಜಿ.ಟಿ.ಎಸ್, ಡಾ.ವೀರಶೆಟ್ಟಿ, ರಾಜಶೇಖರ ಮಡಿವಾಳ ಇದ್ದರು.