ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾಗತಕ್ಕಾಗಿ ನಗರದಲ್ಲಿ ಅಳವಡಿಸಿದ್ದ ಹಿಂದಿ ಬರಹವಿದ್ದ ಫ್ಲೆಕ್ಸ್ಗಳಿಗೆ ಕರ್ನಾಟಕ ರಕ್ಷಣಾ ವೇದಿಕೆಯ (ಕರವೇ) ಕಾರ್ಯಕರ್ತರು ಮಸಿ ಬಳಿದು ಆಕ್ರೋಶ ಹೊರಹಾಕಿದರು.
ಮೈಸೂರು ರಸ್ತೆಯಲ್ಲಿ ಪ್ರಧಾನಿ ಅವರ ಹಾದು ಹೋಗಲಿದ್ದು, ರಸ್ತೆ ವಿಭಜಕ ಹಾಗೂ ಅಕ್ಕ–ಪಕ್ಕದಲ್ಲಿ ಸಚಿವ ಮುನಿರತ್ನ ಮತ್ತು ಬೆಂಬಲಿಗರು ಫ್ಲೆಕ್ಸ್ ಅಳವಡಿಸಿದ್ದರು. ಅದರಲ್ಲಿ ಹಿಂದಿ ಬರಹವೇ ಹೆಚ್ಚಿತ್ತು.
ಅದನ್ನು ಗಮನಿಸಿದ್ದ ಕರವೇ ಕಾರ್ಯಕರ್ತರು, ರಸ್ತೆಯುದಕ್ಕೂ ಫ್ಲೆಕ್ಸ್ಗಳಿಗೆ ಮಸಿ ಬಳಿದರು. ಗಸ್ತಿನಲ್ಲಿದ್ದ ಪೊಲೀಸರು, ಕಾರ್ಯಕರ್ತರನ್ನು ತಡೆಯಲು ಯತ್ನಿಸಿದರು. ಇದಕ್ಕೆ ಜಗ್ಗದ ಕಾರ್ಯಕರ್ತರು, ಬಹುತೇಕ ಫ್ಲೆಕ್ಸ್ಗಳಿಗೆ ಮಸಿ ಎರಚಿದರು. ‘ಹಿಂದಿ ಹೇರಿಕೆ ಬೇಡ’ ಎಂಬುದಾಗಿ ಘೋಷಣೆ ಕೂಗಿದರು.
‘ಪ್ರಧಾನಿ ಅವರಿಗೆ ಕನ್ನಡ ಭಾಷೆಯಲ್ಲಿ ಸ್ವಾಗತ ಕೋರಲಿ. ಅದನ್ನು ಬಿಟ್ಟು ಹಿಂದಿಯಲ್ಲಿ ಸ್ವಾಗತ ಕೋರುವುದನ್ನು ಸಹಿಸುವುದಿಲ್ಲ. ಕರ್ನಾಟಕದಲ್ಲಿ ಹಿಂದಿ ಹೇರಿಕೆ ಆಗಲು ಬಿಡುವುದಿಲ್ಲ’ ಎಂದು ಕಾರ್ಯಕರ್ತರು ಗುಡುಗಿದರು.
ಫ್ಲೆಕ್ಸ್ ತೆರವು: ಕರವೇ ಕಾರ್ಯಕರ್ತರು ಮಸಿ ಬಳಿದ ನಂತರ, ನಗರದ ಹಲವೆಡೆ ಅಳವಡಿಸಲಾಗಿದ್ದ ಹಿಂದಿ ಬರಹದ ಫ್ಲೆಕ್ಸ್ಗಳನ್ನು ಬಿಜೆಪಿ ಕಾರ್ಯಕರ್ತರೇ ತೆರವು ಮಾಡಿದರು.