ಸುಂಟಿಕೊಪ್ಪ: ಕಳೆದ ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕೆದಕಲ್ ಗ್ರಾಮದ ಏಳನೇ ಮೈಲು ನಿವಾಸಿ ಪೌಲ್ ಡಿಸೋಜ ಅವರ ಮೃತದೇಹವು ಗುರುವಾರ ಬೆಳಿಗ್ಗೆ ಸೌಭಾಗ್ಯ ತೋಟದ ಕೆರೆಯಲ್ಲಿ ಪತ್ತೆಯಾಗಿದೆ.
ಅ.29 ರಂದು ಮನೆಯಿಂದ ಹೊರಗೆ ತೆರಳಿದ್ದ ಪೌಲ್ ಡಿಸೋಜ ಮನೆಗೆ ವಾಪಾಸಾಗಿರಲಿಲ್ಲ. ಮನೆಯವರು ಹತ್ತಿರದ ಮನೆ ಹಾಗೂ ಸಂಬಂಧಿಕರ ಮನೆಗಳಲ್ಲಿ ವಿಚಾರಿಸಿದ್ದಾರೆ. ಸುಳಿವು ದೊರೆಯದಿದ್ದಾಗ ಈ ಬಗ್ಗೆ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಹುಡುಕಾಟ ನಡೆಸಿದ್ದರು.
ಗುರುವಾರ ಬೆಳಿಗ್ಗೆ ಪೌಲ್ ಡಿಸೋಜ ಅವರ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದ್ದು, ಮೃತದೇಹದಲ್ಲಿ ಕಲ್ಲುಗಳು ಕಟ್ಟಿಕೊಂಡಿರುವುದು ಗೋಚರಿಸಿದೆ. ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ.
ಅಂತ್ಯ ಸಂಸ್ಕಾರಕ್ಕೆ ತೆರಳುವ ವೇಳೆ ಅಪಘಾತ: ಪೌಲ್ ಡಿಸೋಜ ಅವರ ಅಂತಿಮ ದರ್ಶನಕ್ಕೆಂದು ಸುಂಟಿಕೊಪ್ಪಕ್ಕೆ ಅವರ ಮಗಳು ಹಾಗೂ ಸಂಬಂಧಿಕರು ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿಯಾದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟು, ನಾಲ್ವರು ಗಾಯಗೊಂಡಿದ್ದಾರೆ.
ಬೆಂಗಳೂರಿನಲ್ಲಿ ನೆಲೆಸಿದ್ದ ಪೌಲ್ ಮಗಳು ವನಿಷಾ ಡಿಸೋಜ, ಅಣ್ಣನ ಮಕ್ಕಳಾದ ಸಿಲ್ವಿನ್ ಡಿಸೋಜ, ಪ್ರವೀಣ್ ಡಿಸೋಜ ಹಾಗೂ ಇನ್ನಿಬ್ಬರು ಸಂಬಂಧಿಕರು ಸಾವಿನ ಸುದ್ದಿ ಅರಿತು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಕಾರಿನಲ್ಲಿ ಗುರುವಾರ ಬೆಳಿಗ್ಗೆ ಹೊರಟಿದ್ದರು.
ಕಾರು ಬೆಂಗಳೂರು ಬಳಿಯ ಬಿಡದಿಗೆ ತಲುಪುವಾಗ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ಗೆ ಅಪ್ಪಳಿಸಿ ಮಗುಚಿಕೊಂಡಿದೆ. ಕಾರಿನಡಿಯಲ್ಲಿ ಸಿಲುಕಿಕೊಂಡ ಪೌಲ್ ಅವರ ಅಣ್ಣನ ಮಗನಾದ ಸಿಲ್ವಿನ್ ಡಿಸೋಜ(48) ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.
ಕಾರಿನಲ್ಲಿದ್ದ ಮಗ್ದಲೀನ್ ಡಿಸೋಜ,ಪ್ರವೀಣ್ ಡಿಸೋಜ, ಸ್ಟೆಲ್ಲ ಡಿಸೋಜ, ವನಿಷಾ ಡಿಸೋಜ ಗಾಯಗೊಂಡು ಅಕ್ಷಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತಪಟ್ಟ ಇಬ್ಬರ ಅಂತ್ಯಕ್ರೀಯೆಯು ಸುಂಟಿಕೊಪ್ಪದ ಮಾದಾಪುರ ರಸ್ತೆಯಲ್ಲಿರುವ ಕ್ರೈಸ್ತ ಸ್ಮಶಾನದಲ್ಲಿ ಶುಕ್ರವಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.