ಮಡಿಕೇರಿ: ಜನವರಿ 3ರಿಂದ 8ರವರೆಗೆ ಕೊಡಗು ಜಿಲ್ಲೆಯ 4 ಕಡೆ ನಡೆಯಲಿರುವ 67ನೇ ರಾಷ್ಟ್ರಮಟ್ಟದ ಬಾಲಕಿಯರ ಹಾಕಿ ಪಂದ್ಯಾವಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಚಾಲನೆ ನಡೆಯಲಿದೆ. ಈ ಪ್ರತಿಷ್ಠಿತ ಪಂದ್ಯಾವಳಿಯನ್ನು ಮಡಿಕೇರಿ ಸೇರಿದಂತೆ ಕೂಡಿಗೆ, ಪೊನ್ನಂಪೇಟೆ ಮತ್ತು ಸೋಮವಾರಪೇಟೆಯ ಟರ್ಫ್ ಮೈದಾನದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ದೇಶದ ವಿವಿಧ ರಾಜ್ಯಗಳಿಂದ ಸರಿಸುಮಾರು 38 ರಿಂದ 40 ತಂಡಗಳು ಈ ಹಾಕಿ ಉತ್ಸವದಲ್ಲಿ ಭಾಗವಹಿಸಲಿವೆ. ಒಟ್ಟು 840 ಕ್ರೀಡಾಪಟುಗಳು, 40ರಿಂದ 50 ತೀರ್ಪುಗಾರರು, 20 ರಾಜ್ಯಮಟ್ಟದ ಅಧಿಕಾರಿಗಳು ಮತ್ತು ಅತಿಥಿಗಳು ಒಳಗೊಂಡಂತೆ ಒಟ್ಟು 950 ಮಂದಿ ಇದಕ್ಕಾಗಿ ಜಿಲ್ಲೆಗೆ ಬರಲಿದ್ದಾರೆ.
ಇಷ್ಟೊಂದು ಬೃಹತ್ ಮಟ್ಟದ ಪಂದ್ಯಾವಳಿಗೆ ಹಾಗೂ ಇದರಲ್ಲಿ ಭಾಗವಹಿಸುವ ಇಷ್ಟೊಂದು ದೊಡ್ಡ ಸಂಖ್ಯೆ ಅತಿಥಿಗಳು ಹಾಗೂ ಕ್ರೀಡಾಪಟುಗಳಿಗೆ ವಸತಿ, ಊಟ, ಶೌಚಾಲಯ ಮತ್ತಿತ್ತರೆ ಸೌಲಭ್ಯಗಳನ್ನು ಒದಗಿಸುವ ಗುರುತರವಾದ ಜವಾಬ್ದಾರಿ ಈಗ ಜಿಲ್ಲಾಡಳಿತದ ಹೆಗಲೇರಿದೆ. ಇದಕ್ಕಾಗಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಮಂಗಳವಾರ ವಿಸ್ತೃತವಾದ ಪೂರ್ವಭಾವಿ ಸಭೆ ನಡೆಸಿ ಕೆಲವೊಂದು ಸೂಚನೆಗಳನ್ನು ನೀಡಿದರು.
ಮಾಹಿತಿ ಸಂಗ್ರಹ: ಮೊದಲಿಗೆ ಜಿಲ್ಲಾಧಿಕಾರಿ ಅವರು ಹಾಕಿ ಕ್ರೀಡೆಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದರು.
ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಸದಾಶಿವ ಪಲ್ಲೇದ್ ಅವರು ಮಾತನಾಡಿ, ‘ಹಾಕಿ ಪಂದ್ಯಾವಳಿಗೆ ರಾಷ್ಟ್ರದ ಹಲವು ರಾಜ್ಯಗಳಿಂದ ಹಾಕಿ ತಂಡಗಳು ಆಗಮಿಸಲಿವೆ. ಅಂದಾಜು 38 ರಿಂದ 40 ತಂಡಗಳು ಭಾಗವಹಿಸುವ ಸಾಧ್ಯತೆ ಇದೆ. ಒಂದು ತಂಡದಲ್ಲಿ 18 ಕ್ರೀಡಾಪಟುಗಳು, ಒಬ್ಬ ತರಬೇತುದಾರರು, ಒಬ್ಬ ತಂಡದ ವ್ಯವಸ್ಥಾಪಕರು, ಒಬ್ಬ ವ್ಯವಸ್ಥಾಪಕ ಪ್ರಬಂಧಕರು ಸೇರಿದಂತೆ ಒಟ್ಟು 21 ಜನರು ಇರಲಿದ್ದಾರೆ. ಇದರಲ್ಲಿ ಕ್ರೀಡಾಪಟುಗಳು, ತೀರ್ಪುಗಾರರು, ರಾಜ್ಯ ಮಟ್ಟದ ಅಧಿಕಾರಿಗಳು ಮತ್ತು ಅತಿಥಿಗಳನ್ನು ಒಳಗೊಂಡಂತೆ ಎಲ್ಲರಿಗೂ ವಸತಿ ವ್ಯವಸ್ಥೆ ಕಲ್ಪಿಸಬೇಕಿದೆ’ ಎಂದು ಮಾಹಿತಿ ನೀಡಿದರು.
‘ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳಿಗೆ ಸೌಕರ್ಯ ಕಲ್ಪಿಸಬೇಕಿದೆ. ಪಂದ್ಯ ನಡೆಯುವ ಒಂದೊಂದು ಕಡೆಯೂ ಕನಿಷ್ಠ ಎಂದರೂ 8ರಿಂದ 10 ತಂಡಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಕ್ರಮ ವಹಿಸಬೇಕಿದೆ’ ಎಂದು ಅವರು ಸಭೆಯ ಗಮನಕ್ಕೆ ತಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾತನಾಡಿ, ‘ವಸತಿ ಶಾಲೆ, ವಿದ್ಯಾರ್ಥಿ ನಿಲಯ ಜೊತೆಗೆ ಕಲ್ಯಾಣ ಮಂಟಪಗಳನ್ನು ಕಾಯ್ದಿರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ ಮಾತನಾಡಿ, ‘ಸ್ಥಳೀಯ ಆಡಳಿತಗಳಿಂದ ಸ್ವಯಂ ಸೇವಕರನ್ನು ನಿಯೋಜಿಸಬೇಕು. ಟ್ಯಾಂಕರ್ ಮೂಲಕವು ನೀರು ಒದಗಿಸಬೇಕು. ಎಲ್ಲಾ ಇಲಾಖೆಯ ಅಧಿಕಾರಿಗಳು ಜವಾಬ್ದಾರಿಯಿಂದ ತಮ್ಮದೇ ಕಾರ್ಯಕ್ರಮವೆಂದು ಭಾವಿಸಿ ರಾಷ್ಟ್ರಮಟ್ಟದ ಹಾಕಿ ಪಂದ್ಯಾವಳಿ ಯಶಸ್ಸಿಗೆ ಕೈಜೋಡಿಸಬೇಕು’ ಎಂದು ಹೇಳಿದರು.
ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಪೂರ್ಣೇಶ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶೇಖರ್, ಶಿಕ್ಷಣಾಧಿಕಾರಿ ಮಹದೇವಸ್ವಾಮಿ, ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪುಟ್ಟರಾಜು, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಗಂಗಾಧರ ನಾಯಕ, ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕ ಬಸಪ್ಪ, ಜಿಲ್ಲಾ ಪಂಚಾಯಿತಿಯ ಎಂಜಿನಿಯರ್ ಸುರೇಶ್ ಕುಮಾರ್, ಜಿಲ್ಲಾ ಕಾರ್ಮಿಕ ಅಧಿಕಾರಿ ಹರ್ಷವರ್ಧನ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕಿ ಅನಿತಾ ಭಾಸ್ಕರ್, ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿ ದಿವಾಕರ, ಪ್ರಾದೇಶಿಕ ಸಾರಿಗೆ ಕಚೇರಿಯ ರೀಟಾ ಇದ್ದರು.
ಎಲ್ಲೆಲ್ಲಿ ವಾಸ್ತವ್ಯ?
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಎಂ.ಚಂದ್ರಕಾಂತ್ ಮಾತನಾಡಿ ‘ಜಿಲ್ಲೆಯ ಬಸವನಹಳ್ಳಿ ಕೂಡಿಗೆ ಕುಶಾಲನಗರ ತೋಳೂರು ಶೆಟ್ಟಳ್ಳಿ ತಿತಿಮತಿ ಪೊನ್ನಂಪೇಟೆ ಮಡಿಕೇರಿ ಸೇರಿದಂತೆ ಹಲವೆಡೆ ವಿವಿಧ ವಿದ್ಯಾರ್ಥಿ ನಿಲಯಗಳು ಇವೆ. ಜತೆಗೆ ಸಮಾಜ ಕಲ್ಯಾಣ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಗಳೂ ಇವೆ. ಅವುಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ’ ಎಂದರು.
ಅಧಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಅಧಿಕಾರಿಗಳಿಗೆ ಕೆಲವೊಂದು ಸೂಚನೆಗಳನ್ನು ನೀಡಿದರು.
* ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಜೊತೆ ಸಮಾಜ ಕಲ್ಯಾಣ ಹಿಂದುಳಿದ ವರ್ಗಗಳ ಕಲ್ಯಾಣ ನಗರಾಭಿವೃದ್ಧಿ ಇಲಾಖೆ ಪಂಚಾಯತ್ ರಾಜ್ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೃಷಿ ತೋಟಗಾರಿಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ವೈದ್ಯಕೀಯ ಶಿಕ್ಷಣ ಸೆಸ್ಕ್ ಹೀಗೆ ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.
*ಆಗಮಿಸುವ ಕ್ರೀಡಾಪಟುಗಳು ತೀರ್ಪುಗಾರರು ಹಾಗೂ ತರಬೇತಿದಾರರು ಹೀಗೆ ಎಲ್ಲರಿಗೂ ವಸತಿ ಉಪಹಾರ ಊಟ ಬಿಸಿ ನೀರು ಶೌಚಾಲಯ ಹೀಗೆ ಪ್ರತಿಯೊಂದನ್ನು ಸಹ ಕಲ್ಪಿಸಬೇಕಿದೆ. ಯಾವುದೇ ರೀತಿಯ ವ್ಯತ್ಯಾಸ ಆಗದಂತೆ ಅಗತ್ಯ ಪೂರ್ವ ತಯಾರಿ ಮಾಡಿಕೊಳ್ಳಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಿಗೆ ಸೂಚಿಸಿದರು.
*ಪಂದ್ಯಾವಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಲು ಕೋರಿ ಕ್ರೀಡಾ ಇಲಾಖೆಗೆ ಪತ್ರ ಬರೆಯಬೇಕು ಹಾಗೂ ವಸತಿ ಆಹಾರ ಸಾರಿಗೆ ವೇದಿಕೆ ಕುಡಿಯುವ ನೀರು ಶಿಷ್ಠಾಚಾರ ಸ್ವಾಗತ ವೈದ್ಯಕೀಯ ಹೀಗೆ ವಿವಿಧ ಉಪ ಸಮಿತಿಗಳ ಪಟ್ಟಿ ಮಾಡಿ ಕಾರ್ಯ ನಿರ್ವಹಿಸ ಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಹೇಳಿದರು.
*ಕ್ರೀಡಾಪಟುಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ತೆರಳಲು ವಾಹನ ವ್ಯವಸ್ಥೆ ಮಾಡಬೇಕು. ಕುಡಿಯುವ ನೀರು ಕಲ್ಪಿಸುವುದು ಅಗತ್ಯ ಬಸ್ ಸೌಲಭ್ಯ ಶಿಷ್ಟಾಚಾರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕರಿಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.