ಮಡಿಕೇರಿ: ‘ಕೊಡಗು ಜಿಲ್ಲೆ ಬಾಣೆ ಜಮೀನನ್ನು ಅರಣ್ಯ ಪ್ರದೇಶಕ್ಕೆ ಸೇರಿಸುವ ದೊಡ್ಡ ಷಡ್ಯಂತ್ರವನ್ನು ಪರಿಸರವಾದಿಗಳು ಮಾಡುತ್ತಿದ್ದು, ಜನರು ಎಚ್ಚರಿಕೆಯಿಂದ ಇರಬೇಕು’ ಎಂದು ಹಿರಿಯ ವಕೀಲ ಎ.ಕೆ. ಸುಬ್ಬಯ್ಯ ಹೇಳಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಜಮ್ಮಾ- ಬಾಣೆ ಜಮೀನುಗಳ ಹಿಡುವಳಿಯನ್ನು ಸಕ್ರಮಗೊಳಿಸಿ, ಹಿಡುವಳಿದಾರರಿಗೆ ಸೀಮಿತ ಹಕ್ಕನ್ನು ನೀಡುವ ಹೊಸ ನಿಯಮಾವಳಿಗಳ ಬಗ್ಗೆಯೂ ಹೈಕೋರ್ಟ್ನಲ್ಲಿ ಚರ್ಚೆ ನಡೆದಿತ್ತು. ವ್ಯವಸಾಯ ಮಾಡಿದ ಹಿಡುವಳಿದಾರಿಗೆ ಕಂದಾಯ ವಿಧಿಸಬೇಕೆಂಬ ಬೇಡಿಕೆಯೂ ಹಿಂದಿನ ಸರ್ಕಾರ ಅವಧಿಯಲ್ಲಿ ತೀರ್ಮಾನದಲ್ಲಿತ್ತು. ಆದರೆ, ಈ ನಡುವೆ ಅರಣ್ಯ ಇಲಾಖೆ ಹಾಗೂ ಪರಿಸರವಾದಿಗಳು ಏಕಾಏಕಿ ಜಮ್ಮಾ ಬಾಣೆ ಸಂಬಂಧ ಜಿಲ್ಲಾಡಳಿತದ ಮೂಲಕ ಲೆಕ್ಕ ಪರಿಶೋಧನೆ ನಡೆಸಿ, ಜಿಲ್ಲೆಯ ಬಾಣೆ ಜಮೀನುಗಳನ್ನು ಅರಣ್ಯಕ್ಕೆ ಸೇರಿಸುವ ಕುತಂತ್ರಕ್ಕೆ ಕೈ ಹಾಕಿವೆ’ ಎಂದು ಆರೋಪಿಸಿದರು.
ಜಮ್ಮಾ- ಬಾಣೆ ಪ್ರದೇಶಗಳನ್ನು ಸಾಗುವಳಿಯಾಗಿ ಪರಿವರ್ತಿಸುವ ಕಾರ್ಯಕ್ಕೆ ಅಡ್ಡಲಾಗಿ ನಿಂತಿರುವ ಪರಿಸರವಾದಿಗಳು, ಜಿಲ್ಲೆಯಲ್ಲಿ ಕೃಷಿ ಬಿಕ್ಕಟ್ಟನ್ನು ನಿರ್ಮಿಸುತ್ತಿದ್ದಾರೆ. ಈ ಬಗ್ಗೆ ಜಿಲ್ಲೆಯ ಜನರು ಎಚ್ಚೆತ್ತು ಜನಾಂದೋಲನಕ್ಕೆ ಮುಂದಾಗಬೇಕು; ಭವಿಷ್ಯತ್ತಿನಲ್ಲಿ ಜಿಲ್ಲೆಯ ಜಮ್ಮಾ ಬಾಣೆಗಳನ್ನು ಉಳಿಸುವ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಜಮ್ಮಾ ಬಾಣೆಯಲ್ಲಿ ವ್ಯವಸಾಯ ಮಾಡುವುದಕ್ಕೆ ಕಂದಾಯ ಪಾವತಿಸುವ ಮೂಲಕ ಹಕ್ಕು ಸಾಧಿಸಿ, ಮಾರಾಟ ಮಾಡುವುದಕ್ಕೂ ಮುಂದಿನ ದಿನದಲ್ಲಿ ಅವಕಾಶ ನೀಡಬೇಕು. ರೈತರ ಹೋರಾಟಕ್ಕೆ ಮುಳ್ಳಗುತ್ತಿರುವ ಪರಿಸರವಾದಿಗಳೇ ಮುಳ್ಳಾಗುತ್ತಿದ್ದಾರೆ. ಭವಿಷ್ಯತ್ತಿನಲ್ಲಿ ಕೊಡಗನ್ನೇ ಸಂಪೂರ್ಣ ಅರಣ್ಯ ಮಾಡುವಲ್ಲಿ ಸಂಚು ನಡೆಸುತ್ತಿದ್ದಾರೆ ಎಂದು ಸುಬ್ಬಯ್ಯ ಆತಂಕ ವ್ಯಕ್ತಪಡಿಸಿದರು.
ರೈಲು ಮಾರ್ಗ; ಜನಾಭಿಪ್ರಾಯ ಸಂಗ್ರಹವಾಗಲಿ: ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ರೈಲು ಮಾರ್ಗ ಅನಿವಾರ್ಯ. ಪರಿಸರವಾದಿಗಳ ಹೆಸರಿನಲ್ಲಿ ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಒಂದು ಸಮುದಾಯದ ಜನರು ರೈಲು ಮಾರ್ಗಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಜಿಲ್ಲೆಯ ಜನರ ಅಭಿಪ್ರಾಯವನ್ನು ಮೊದಲು ಸಂಗ್ರಹಿಸಬೇಕು ಎಂದು ಕೋರಿದರು. ‘ರೈಲು ಮಾರ್ಗ ವಿಚಾರದಲ್ಲಿ ಸಂಸದ ಪ್ರತಾಪ್ ಸಿಂಹ ಅವರು ರೈಲು ಬೇಡ ಎನ್ನುವ ಏಕಪಕ್ಷೀಯ ನಿರ್ಣಯ ಕೈಗೊಂಡು, ಜಿಲ್ಲೆಯ ಜನರ ನಂಬಿಕೆಗೆ ದ್ರೋಹ ಎಸಗುತ್ತಿದ್ದಾರೆ. ಶಾಸಕ ಕೆ.ಜಿ. ಬೋಪಯ್ಯ ಅವರಿಗೆ ರೈಲು ಬೇಕು ಎನ್ನುವ ಮನಸ್ಸಿದೆ. ಆದರೆ, ಕೊಡವರ ವಿರೋಧ ಎದುರಾಗುತ್ತೆ ಎಂಬ ಕಾರಣಕ್ಕೆ ಮೌನವಾಗಿದ್ದಾರೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ಕೃಷಿ ಅರಣ್ಯ ಯೋಜನೆ ಅಡಿ ಖಾಸಗಿ ಜಮೀನಿನಲ್ಲಿ ಅರಣ್ಯ ಬೆಳೆಸುವ ಯೋಜನೆ ಜಾರಿಗೆ ಶಾಸಕರು, ಅಧಿಕಾರಿಗಳು ಪ್ರಯತ್ನಿಸಿಲ್ಲ ಎಂದು ಆಪಾದಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಣ್ಣ ಬೆಳೆಗಾರರ ಸಂಘದ ಅಧ್ಯಕ್ಷ ನಂದಾ ಸುಬ್ಬಯ್ಯ, ವಕೀಲ ವಿದ್ಯಾಧರ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.