ಮಡಿಕೇರಿ: ಟ್ಯಾಕ್ಸಿ ಖರೀದಿಗಾಗಿ ಅಲ್ಪಸಂಖ್ಯಾತರಿಗೆ ಸರ್ಕಾರ ನೀಡುವ ಸಬ್ಸಿಡಿ ಹಣ ಮಂಜೂರು ಮಾಡುವುದಕ್ಕಾಗಿ ₹ 10 ಸಾವಿರ ಲಂಚ ಪಡೆಯುತ್ತಿದ್ದ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಕಚೇರಿ ಸಹಾಯಕಿ ಲತಾ ಆಚಾರ್ ಅವರನ್ನು ಲೋಕಾಯುಕ್ತ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಸೋಮವಾರಪೇಟೆ ತಾಲ್ಲೂಕಿನ ವ್ಯಕ್ತಿಯೊಬ್ಬರು ನಿಗಮದಡಿ ಟ್ಯಾಕ್ಸಿಯನ್ನು ಖರೀದಿಸಿದ್ದರು. ಇವರಿಗೆ ಸಬ್ಸಿಡಿ ಹಣ ₹ 2.5 ಲಕ್ಷ ನೀಡಬೇಕಿತ್ತು. ಇದಕ್ಕಾಗಿ ಆರೋಪಿಯು ಶೇ 10ರಷ್ಟು ಲಂಚ ನೀಡಬೇಕು ಎಂದು ಕೇಳಿದ್ದರು. ಈ ಕುರಿತು ವ್ಯಕ್ತಿಯು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಈ ಸಂಬಂಧ ₹ 10 ಸಾವಿರ ಲಂಚ ತೆಗೆದುಕೊಳ್ಳುವಾಗ ಲತಾ ಆಚಾರ್ ಅವರನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಲೋಕಾಯುಕ್ತ ಮೈಸೂರು ವಿಭಾಗದ ಎಸ್.ಪಿ ಸುರೇಶ್ಬಾಬು ಮಾರ್ಗದರ್ಶನದಲ್ಲಿ ಕೊಡಗು ಜಿಲ್ಲೆಯ ಡಿವೈಎಸ್ಪಿ ಎಂ.ಎಸ್.ಪವನ್ಕುಮಾರ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ.