ವಿರಾಜಪೇಟೆ: ಹರಿಯಾಣ ಹಾಗೂ ಉತ್ತರಪ್ರದೇಶದಿಂದ 35 ಜಾನುವಾರುಗಳನ್ನು ಕೊಡಗು ಜಿಲ್ಲೆಯ ಮೂಲಕ ಕೇರಳಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿಯನ್ನು ಭಾನುವಾರ ವಶಪಡಿಸಿಕೊಂಡಿರುವ ಪೊಲೀಸರು, ನಾಲ್ವರು ಆರೋಪಿಗಳನ್ನು ಪೆರುಂಬಾಡಿ ಚೆಕ್ಪೋಸ್ಟ್ ಬಳಿ ಬಂಧಿಸಿದ್ದಾರೆ.
ಹರಿಯಾಣ ರಾಜ್ಯದ ನೂಹ್ರ ಜಿಲ್ಲೆಯ ಐ.ಇರ್ಷಾದ್, ಜಾಯಿದ್, ಷಹಬುದ್ದೀನ್ ಹಾಗೂ ಮುಬಿನ್ ಬಂಧಿತರು.
ಗೋಣಿಕೊಪ್ಪಲು- ಬಾಳುಗೋಡು ಮಾರ್ಗವಾಗಿ ಕೇರಳಕ್ಕೆ ತೆರಳುತ್ತಿದ್ದ ರಾಜಸ್ತಾನ ನೋಂದಣಿ ಸಂಖ್ಯೆಯ 10 ಚಕ್ರವುಳ್ಳ ಲಾರಿಯನ್ನು ಪೊಲೀಸರು ಪರಿಶೀಲಿಸಿದಾಗ ಜಾನುವಾರು ಸಾಗಣೆ ಬೆಳಕಿಗೆ ಬಂದಿದೆ.
ಲಾರಿಯಲ್ಲಿ ಅಂದಾಜು 1ರಿಂದ 2 ವರ್ಷದೊಳಗಿನ 33 ಕೋಣಗಳು ಹಾಗೂ 2 ಎಮ್ಮೆಗಳು ಇದ್ದವು.
ಆರೋಪಿಗಳು, 17 ಕೋಣಗಳನ್ನು ಹರಿಯಾಣದ ನೊಹ್ರದಿಂದ ಹಾಗೂ 2 ಎಮ್ಮೆ, 16 ಕೋಣಗಳನ್ನು ಉತ್ತರ ಪ್ರದೇಶದಿಂದ ಖರೀದಿಸಿ, ಕೇರಳದ ಕಸಾಯಿಖಾನೆಗೆ ಮಾರಾಟ ಮಾಡಲು ಸಾಗಿಸುತ್ತಿದ್ದರು ಎನ್ನಲಾಗಿದೆ. ವಿರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.