ಮಡಿಕೇರಿ: ಜೀವನದಿ ಕಾವೇರಿ ತೀರ್ಥೋದ್ಭವವು ಅ.17ರಂದು ಮಧ್ಯಾಹ್ನ 1.11ಕ್ಕೆ ನಡೆಯಲಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಕೆಲವು ನಿರ್ಬಂಧ ಹೇರಲು ಜಿಲ್ಲಾಡಳಿತ ತೀರ್ಮಾನಿಸಿದೆ.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ‘ಕೋವಿಡ್ ಇನ್ನೂ ದೂರವಾಗಿಲ್ಲ. ಹೀಗಾಗಿ, ಕೆಲವು ನಿರ್ಬಂಧ ವಿಧಿಸುವುದು ಅನಿವಾರ್ಯ. ಭಾಗಮಂಡಲದಿಂದ ತಲಕಾವೇರಿಗೆ ಕಾಲ್ನಡಿಗೆಯಲ್ಲಿ ಬರುವ ಭಕ್ತರಿಗೆ ಮಾತ್ರ ತೀರ್ಥೋದ್ಭವದ ವೇಳೆ ಅವಕಾಶ ಇರಲಿದೆ. ಭಕ್ತರು 72 ಗಂಟೆಯ ಮೊದಲು ಪಡೆದ ಕೋವಿಡ್ ನೆಗೆಟಿವ್ ವರದಿ ಪ್ರಮಾಣ ಪತ್ರ ತೋರಿಸಬೇಕು. ಒಂದು ಡೋಸ್ ಲಸಿಕೆ ಪಡೆದಿರಬೇಕು. ಜೊತೆಗೆ, ಗುರುತಿನ ಚೀಟಿ ತೋರಿಸಬೇಕು. ಅವರಿಗೆ ಮಾತ್ರ ಅವಕಾಶ ಇರಲಿದೆ’ ಎಂದು ಹೇಳಿದರು.
‘ಪ್ರವಾಸಿಗರಿಗೆ ಅವಕಾಶ ಇರುವುದಿಲ್ಲ. ಬೆಳಿಗ್ಗೆ 6ರಿಂದ ಸಂಜೆ 6ರ ತನಕ ವಾಹನಕ್ಕೆ ಪ್ರವೇಶ ಇರುವುದಿಲ್ಲ. ಭಾಗಮಂಡಲದಲ್ಲೇ ವಾಹನ ನಿಲುಗಡೆ ಮಾಡಬೇಕು. ಬಂದೋಬಸ್ತ್ ಹಾಗೂ ಧಾರ್ಮಿಕ ಕಾರ್ಯಕ್ಕೆ ತೆರಳುವವರಿಗೆ ಮಾತ್ರ ವಾಹನದಲ್ಲಿ ತೆರಳಬಹುದು’ ಎಂದು ಹೇಳಿದರು.
‘ತೀರ್ಥೋದ್ಭವ ಹಾಗೂ ವಿಜಯದಶಮಿ ಆಸುಪಾಸಿನಲ್ಲಿ ಹೆಚ್ಚಿನ ಜನರು ಸೇರುವ ಪ್ರದೇಶಗಳಿಗೆ ನಿರ್ಬಂಧ ವಿಧಿಸುವ ಅಧಿಕಾರವನ್ನು ಜಿಲ್ಲಾಧಿಕಾರಿಗೆ ನೀಡಲಾಗಿದೆ. ಅವರೇ ತೀರ್ಮಾನ ಕೈಗೊಳ್ಳಲಿದ್ದಾರೆ’ ಎಂದು ಹೇಳಿದರು.
ಭಾಗಮಂಡಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸತೀಶ್ಕುಮಾರ್ ಮಾತನಾಡಿ, ಈಗಾಗಲೇ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ತೀರ್ಥೋದ್ಭವದಂದು ಇಡೀ ದಿನ ಕ್ಷೇತ್ರಕ್ಕೆ ವಾಹನ ನಿರ್ಬಂಧಿಸಬೇಕು ಎಂದು ಕೋರಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್ ತೀರ್ಥೋದ್ಭವ ದಿನದಂದು ಪಾಲ್ಗೊಳ್ಳುವವರಿಗೆ ಕಳೆದ ಬಾರಿಯಂತೆ ಅ.14ರಂದು ಆರ್ಟಿಪಿಸಿಆರ್ ಪರೀಕ್ಷೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಕೋವಿಡ್ ಲಸಿಕೆ ನೀಡುವಲ್ಲಿ ಜಿಲ್ಲೆ 2ನೇ ಸ್ಥಾನದಲ್ಲಿದ್ದು, ಪ್ರಥಮ ಹಂತದ ಲಸಿಕೆಯನ್ನು ಶೇ 94 ಪ್ರಗತಿ ಸಾಧಿಸಲಾಗಿದೆ ಎಂದರು.
ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು, ಮಡಿಕೇರಿ ದಸರಾ ಮತ್ತು ತಲಕಾವೇರಿ ತುಲಾ ಸಂಕ್ರಮಣ ಜಾತ್ರೆ ಸಂಬಂಧ ಕೋವಿಡ್ ನಿಯಮ ಬಗ್ಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದರು.
ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್, ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ಜಿ.ಪಂ ಸಿಇಒ ಭನ್ವರ್ ಸಿಂಗ್, ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಹಾಜರಿದ್ದರು.