ನಾಪೋಕ್ಲು: ಹೋಬಳಿ ವ್ಯಾಪ್ತಿಯ ವಿವಿಧ ಶಾಲೆಗಳಲ್ಲಿ ಮಂಗಳವಾರ ಶಿಕ್ಷಕರ ದಿನ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಶಿಕ್ಷಕರಿಗೆ ಹಲವು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಶಿಕ್ಷಕರೊಂದಿಗೆ ಮಕ್ಕಳು ಆಡಿ ನಲಿದರು. ಇಲ್ಲಿನ ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆ, ಸೇಕ್ರೆಡ್ ಹಾರ್ಟ್ ಶಾಲೆ, ಎಕ್ಸೆಲ್ ಸ್ಕೂಲ್ ಆಫ್ ಎಜುಕೇಶನ್, ಮೂರ್ನಾಡಿನ ಅನುದಾನಿತ ಪ್ರೌಢಶಾಲೆ ಸೇರಿ ವಿವಿಧ ಶಾಲೆಗಳಲ್ಲಿ ಮನೋರಂಜನ ಆಟೋಟಗಳು, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಕಲ್ಯಾಟಂಡ ಶಾರದ ಅಪ್ಪಣ್ಣ ಮಾತನಾಡಿ,‘ಶಿಕ್ಷಕರ ಸ್ವಾರ್ಥ ರಹಿತ ಸೇವೆಯಿಂದ ವಿದ್ಯಾರ್ಥಿಗಳು ಮುಂದಿನ ಸಮಾಜದ ಉತ್ತಮ ಪ್ರಜೆಗಳಾಗಬಲ್ಲರು. ಡಾ.ರಾಧಾಕೃಷ್ಣನ್ ತಮ್ಮ ಆದರ್ಶಗಳ ಮೂಲಕ ಸಮಾಜಕ್ಕೆ ಮಾದರಿಯಾದರು. ಅವರ ಜನ್ಮದಿನವನ್ನು ರಾಷ್ಟ್ರೀಯ ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಮುಂದಿನ ಪ್ರಜೆಗಳನ್ನು ರೂಪಿಸುವಲ್ಲಿ ಶಿಕ್ಷಕರ ಜವಾಬ್ದಾರಿ ಮಹತ್ತರವಾದುದು’ ಎಂದರು.
ನಿರ್ದೇಶಕ ಕಲ್ಯಾಟಂಡ ಪೂಣಚ್ಚ ಮಾತನಾಡಿ, ‘ದಾರ್ಶನಿಕ, ತತ್ವಜ್ಞಾನಿ, ಶಿಕ್ಷಣ ತಜ್ಞ, ಪ್ರಾಧ್ಯಾಪಕ, ಕುಲಪತಿಗಳಾಗಿ ರಾಧಾಕೃಷ್ಣ ಅವರು ಸಲ್ಲಿಸಿದ ಅಪ್ರತಿಮ ಸೇವೆ ಸ್ಮರಣೀಯ’ ಎಂದರು.
ಶಿಕ್ಷಕಿ ಮರ್ಲಿನ್ ಪ್ರಿಯಾ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಡಾ.ಬೊಪ್ಪಂಡ ಜಾಲಿ ಬೋಪಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿರ್ದೇಶಕ ಬೊಳ್ಳಚೆಟ್ಟಿರ ಸುರೇಶ್ ಉಪಸ್ಥಿತರಿದ್ದರು.
ಶಿಕ್ಷಕರ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸಂಸ್ಥೆಯ ವತಿಯಿಂದ ಎಲ್ಲಾ ಶಿಕ್ಷಕರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.