ಮಡಿಕೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ– ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಇಲ್ಲಿ ಭಾನುವಾರ ಟೀಕಾಪ್ರಹಾರ ನಡೆಸಿದರು.
ಹೆಲಿಪ್ಯಾಡ್ನಲ್ಲಿ ಮಾತನಾಡಿದ ಮುಖ್ಯಮಂತ್ರಿ, ‘ಗ್ಯಾರಂಟಿ ಯೋಜನೆಗಳಿಂದ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ ಎಂದರೆ ಏನರ್ಥ? ಎರಡು ಬಾರಿ ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ ಅವರ ಮನಸ್ಥಿತಿ, ಹೆಣ್ಣುಮಕ್ಕಳ ಬಗ್ಗೆ ಅವರಿಗಿರುವ ಭಾವನೆ ಈಗಾಗಲಾದರೂ ಅರ್ಥವಾಯಿತಾ. ಆ ರೀತಿ ಮಾತನಾಡಿದರೆ ಜನರು ಸಹಿಸಿಕೊಳ್ಳುತ್ತಾರಾ’ ಎಂದು ಪ್ರಶ್ನಿಸಿದರು.
‘ಪ್ರಜಾಧ್ವನಿ –2’ ಸಮಾವೇಶದಲ್ಲಿ ಮಾತನಾಡಿದ ಶಿವಕುಮಾರ್, ‘ನನಗೆ ಕುಮಾರಸ್ವಾಮಿ ಕ್ಷಮೆ ಬೇಕಿಲ್ಲ. ಇಡೀ ಮನುಕುಲಕ್ಕೆ ಅಪಮಾನ ಮಾಡಿದ ಅವರನ್ನು ತಮ್ಮ ಜೊತೆಗೆ ಸೇರಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಸ್ಮೃತಿ ಇರಾನಿ, ನಿರ್ಮಲಾ ಸೀತಾರಾಮನ್ ಖುದ್ದು ಹೇಳಿಕೆ ನೀಡಬೇಕು’ ಎಂದು ಒತ್ತಾಯಿಸಿದರು.
‘ಕುಮಾರಸ್ವಾಮಿ ಹೇಳಿಕೆ ವಿರೋಧಿಸಿ ಹೆಣ್ಣುಮಕ್ಕಳು ದಂಗೆ ಏಳುವ ಪರಿಸ್ಥಿತಿ ಬರಬಹುದು. ನಾನು ಹೋರಾಟಕ್ಕೆ ತಡೆ ಮಾಡುವುದಿಲ್ಲ. ಆದರೆ, ಹೋರಾಟ ಗೌರವಯುತವಾಗಿರಬೇಕು’ ಎಂದು ಹೇಳಿದರು.
‘ಹೆಣ್ಣು ಮಕ್ಕಳು ಧಾರ್ಮಿಕ ಸ್ಥಳಗಳಿಗೆ, ತವರಿಗೆ ತೆರಳಲು ಮತ್ತು ಬದುಕು ಕಟ್ಟಿಕೊಳ್ಳಲು ಗ್ಯಾರಂಟಿ ಯೋಜನೆಗಳು ಸಹಾಯಕವಾಗಿವೆ. ಸ್ವಾಭಿಮಾನಿ ಹೆಣ್ಣುಮಕ್ಕಳ ಬಗ್ಗೆ ಎಚ್ಡಿಕೆ ಹೇಳಿಕೆ ಸರಿಯಲ್ಲ. ಪಾಪಗಳು ಹಾಗೂ ಕರ್ಮಗಳು ಲೆಕ್ಕದಲ್ಲಿ ಇದ್ದೇ ಇರುತ್ತದೆ. ಕುಮಾರಸ್ವಾಮಿ ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇದಕ್ಕೆ ಜನರು ಸೂಕ್ತ ಉತ್ತರ ಕೊಡುತ್ತಾರೆ’ ಎಂದು ಹರಿಹಾಯ್ದರು.