ಮಡಿಕೇರಿ: ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ದಕ್ಷಿಣ ಕೊಡಗಿನ ಬಾಳೆಲೆ ಬಳಿಯ ಆರ್ಕೇರಿನಾಡಿನ ಬಿಳೂರು ಗ್ರಾಮದಲ್ಲಿ ಸೋಮವಾರ ಸಂಭ್ರಮದಿಂದ ಹುತ್ತರಿ ಹಬ್ಬವನ್ನು ಆಚರಿಸಲಾಯಿತು.
ಗ್ರಾಮದ ಕಾಂಡೇರ ಸುರೇಶ್ ಅವರ ಭತ್ತದ ಗದ್ದೆಯಲ್ಲಿ ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಸಾಂಪ್ರದಾಯಿಕವಾಗಿ ನವ ಧಾನ್ಯ ಭತ್ತದ ಕದಿರು ಕೊಯ್ಯುವ ಮೂಲಕ ಹಬ್ಬ ಆಚರಿಸಿದರು.
ತೆನೆ ತುಂಬಿದ ಕದಿರುಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ಗಾಳಿಯಲ್ಲಿ ಗುಂಡು ಹಾರಿಸಿ ನಂತರ ಕೊಯ್ದ ಕದಿರನ್ನು ‘ಪೊಲಿಯೇ ಬಾ, ಪೊಲಿ ಪೊಲಿಯೇ ಬಾ’ ಎಂದು ಧಾನ್ಯಲಕ್ಷ್ಮಿಯನ್ನು ಘೋಷವಾಕ್ಯದ ಮೂಲಕ ಆಹ್ವಾನಿಸಿದರು. ನಂತರ ನವ ಧಾನ್ಯವನ್ನು ಪೂಜ್ಯಸ್ಥಾನದಲ್ಲಿಟ್ಟು ವಿಶೇಷ ಪೂಜೆ ಸಲ್ಲಿಸಲಾಯಿತು.
ಸಿಎನ್ಸಿ ಸಂಘಟನೆ ಆಚರಿಸಿದ 30ನೇ ವರ್ಷದ ಸಾರ್ವತ್ರಿಕ ಹುತ್ತರಿ ಹಬ್ಬಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿರಾಟ್ ಹಿಂದೂಸ್ಥಾನ್ ಸಂಘಂನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಶೆಟ್ಟಿ ಅವರು ಹಬ್ಬದ ಆಚರಣೆಯನ್ನು ಶ್ಲಾಘಿಸಿ, ‘ಅತ್ಯಂತ ಸೂಕ್ಷ್ಮ ಕೊಡವ ಜನಾಂಗದ ವಿಶಿಷ್ಟವಾದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಎಲ್ಲರ ಜವಾಬ್ದಾರಿಯಾಗಿದೆ’ ಎಂದು ಹೇಳಿದರು.
ಎನ್.ಯು.ನಾಚಪ್ಪ ಮಾತನಾಡಿ, ‘ಕೊಡವರಿಗೆ ಯಾವುದೇ ಧಾರ್ಮಿಕ ಕ್ರಿಯೆಗೆ ಏಜೆಂಟ್ಗಳ ಅಗತ್ಯವಿಲ್ಲ. ಕೊಡವರು ನೇರವಾಗಿ ಪ್ರಕೃತಿಯ ಚಕ್ರದ ಮೂಲಕ ಸರ್ವಶಕ್ತ ಮತ್ತು ದೈವಿಕತೆಯೊಂದಿಗೆ ಧಾರ್ಮಿಕ ಹಾಗೂ ಭಾವನಾತ್ಮಕ ಸಂಪರ್ಕವನ್ನು ಹೊಂದಿದ್ದಾರೆ. ನಮ್ಮ ಜನಪದ ಆಚರಣೆಗಳನ್ನು ನಾವೇ ನಿರ್ಧರಿಸುತ್ತೇವೆ’ ಎಂದು ಪ್ರತಿಪಾದಿಸಿದರು.
ಕೊಡವ ಜನಾಂಗದ ಎಲ್ಲಾ ಹಬ್ಬಗಳು ಮಾತೃ ಭೂಮಿ, ಪ್ರಕೃತಿ, ದೈವಿಕ ವಸಂತ ಕಾವೇರಿ, ವೀರತನ, ಬೇಟೆಯ ಕೌಶಲ್ಯ, ಜನಾಂಗೀಯ ಸಂಸ್ಕಾರ ಗನ್ ಅಥವಾ ಆಯುಧ ಮತ್ತು ಕೃಷಿ ಪ್ರವೃತ್ತಿಯ ಬದ್ಧತೆಗಳ ಸುತ್ತಲೇ ಸುತ್ತುತ್ತವೆ. ಕೊಡವರ ಹಬ್ಬಗಳು ಸೂರ್ಯ- ಚಂದ್ರರ ಮೂಲಕವೇ ವಿಕಸನಗೊಂಡಿವೆ. ಕೊಡವ ಸಂಸ್ಕೃತಿಯಲ್ಲಿ ಅಥವಾ ಕೊಡವ ಹಬ್ಬಗಳನ್ನು ನಿರ್ಧರಿಸುವ ಸಂದರ್ಭದಲ್ಲಿ ಮೂಢನಂಬಿಕೆಗೆ ಅವಕಾಶವಿಲ್ಲ. ನಮ್ಮ ಗುರು, ಹಿರಿಯರು ಕೊಡವ ಜಾನಪದ ಪರಂಪರೆ, ಕಾನೂನು ವ್ಯವಸ್ಥೆಗಳು ಮತ್ತು ನಮ್ಮ ಆಚರಣೆಗಳನ್ನು ಬಹಳ ಹಿಂದೆಯೇ ರೂಪಿಸಿದ್ದಾರೆ. ಇದು ಪೀಳಿಗೆಯಿಂದ ಪೀಳಿಗೆಗೆ ರವಾನೆಗೊಂಡಿವೆ ಎಂದು ಹೇಳಿದರು.
ಕಾಂಡೇರ ಸುರೇಶ್, ಕಾಂಡೇರ ಲೇಖ ಸುರೇಶ್, ಕಾಂಡೇರ ಲವಿನ್ ಪೂಣಚ್ಚ, ಕಲಿಯಂಡ ಪ್ರಕಾಶ್, ಪಟ್ಟಮಾಡ ಕುಶ, ಮಂದಪಂಡ ಮನೋಜ್, ಅಲ್ಮಂಡ ನೆಹರು, ಅರೆಯಡ ಗಿರೀಶ್, ಚಂಬಂಡ ಜನತ್, ಅಪ್ಪೆಂಗಡ ಮಲೆ, ಕಿರಿಯಮಾಡ ಶೆರಿನ್, ಕಿರಿಯಮಾಡ ಶವಾನ್, ಅಜ್ಜಮಾಡ ಚಿಮ್ಮ, ಜಮ್ಮಡ ಮೋಹನ್, ಮದ್ರಿರ ಕರುಂಬಯ್ಯ, ಪುಲ್ಲಂಗಡ ದೇವಯ್ಯ, ಅದೇಂಗಡ ರಾಣಾ ಬೋಪಣ್ಣ, ಅದೇಂಗಡ ದಿನು ಮೇದಪ್ಪ, ಮಾಳೇಟಿರ ಪೊನ್ನಪ್ಪ, ಪುಟ್ಟಿಚಂಡ ಶಂಕರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.