ಮಡಿಕೇರಿ: ಕೊರೊನಾ ವೈರಸ್ ಹರಡದಂತೆ 21 ದಿನಗಳ ಲಾಕ್ಡಾನ್ ಆದೇಶದ ನಡುವೆಯೂ ಮಡಿಕೇರಿಯಲ್ಲಿ ಶುಕ್ರವಾರ ಜನಜಂಗುಳಿ ಕಂಡುಬಂತು.
ಸಂತೆ ಮಾರುಕಟ್ಟೆಯಲ್ಲಿ ದಿನಸಿ ಹಾಗೂ ತರಕಾರಿ ಅಂಗಡಿಗಳು ಹೆಚ್ಚಾಗಿ ತೆರೆಯಬಹುದೆಂಬ ನಿರೀಕ್ಷೆಯಿಂದ ಗ್ರಾಮೀಣ ಪ್ರದೇಶದ ಜನರು ಹೆಚ್ಚಾಗಿ ಮಡಿಕೇರಿಗೆ ಬಂದಿದ್ದರು. ಕೆಲವರು ಮಡಿಕೇರಿ ಪರಿಸ್ಥಿತಿ ನೋಡಲು ಹೊರಬಂದಿದ್ದರು. ಕೊಡಗು ಜಿಲ್ಲಾಡಳಿತ ಎಷ್ಟೇ ಸೂಚನೆ ನೀಡಿ ಕ್ರಮ ಕೈಗೊಂಡರೂ ಜನರೇ ಅಪಾಯ ಸೃಷ್ಟಿಸಿಕೊಳ್ಳುತ್ತಿರುವ ಆತಂಕ ಕಂಡುಬರುತ್ತಿದೆ.
ಕೆಲವು ಕಡೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಸರ್ಕಾರದ ಆದೇಶ ಉಲ್ಲಂಘನೆ ಮಾಡಲಾಗುತ್ತಿದೆ. ಜನರಿಗೆ ಮೀನು, ಹಂದಿ ಮಾಂಸ ಖರೀದಿಯೇ ಮುಖ್ಯವಾಯಿತೇ ಎಂದು ನೋವನ್ನು ಕೆಲವರು ವ್ಯಕ್ತಪಡಿಸುತ್ತಾರೆ. ಮೀನು ಹಾಗೂ ಹಂದಿ ಮಾಂಸ ಮಾರಾಟ ಮಳಿಗೆ ಎದುರು ಜನದಟ್ಟಣೆ ಕಂಡುಬಂತು.
ಜಿಲ್ಲೆಗೆ ದುಬೈನಿಂದ ಬಂದಿದ್ದ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಜಿಲ್ಲೆ ಭಯಗೊಂಡಿದ್ದಾರೆ. ಪಕ್ಕದ ಉಡುಪಿ, ಮೈಸೂರು, ಕೇರಳ, ಕಾಸರಗೋಡುವಿನಲ್ಲಿಯೂ ಕೊರೊನಾ ತನ್ನ ಉಗ್ರಸ್ವರೂಪ ತೋರಿದೆ.
ನೆರೆ ರಾಜ್ಯದ ಹಲವರಲ್ಲಿ ಸೋಂಕು ತಗುಲಿದ್ದು ಕೊಡಗಿನಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಪೊಲೀಸ್ ಇಲಾಖೆ, ಅಂತರ ಕಾಯ್ದುಕೊಳ್ಳಲು ಮಾರ್ಕ್ ಮಾಡಿದ್ದರೂ ಇದರಲ್ಲಿ ಜನರು ನಿಲ್ಲದೇ ತಮಗಿಷ್ಟ ಬಂದತೆ ಸಾಮಗ್ರಿ ಖರೀದಿಗೆ ಮುಂದಾದರು.
ಮಾಂಸ, ಮೀನು ಖರೀದಿಗೆ ‘ಕ್ಯೂ’:ಅಗತ್ಯ ವಸ್ತು ಖರೀದಿಗೆ ಅವಧಿ ವಿಸ್ತರಿಸುವ ಹಿನ್ನೆಲೆಯಲ್ಲಿ ಮಡಿಕೇರಿ ಸೇರಿದಂತೆ ಇನ್ನಿತರ ಕಡೆ ಶುಕ್ರವಾರ ಮೀನು, ಮಾಂಸ ಖರೀದಿಗೆ ಜನರು ಸರದಿಯಲ್ಲಿ ಕಾದು ಖರೀದಿಸಿದರು. ಹಂದಿ ಮಾಂಸಕ್ಕೂ ಇದೇ ಬೇಡಿಕೆ ಸೃಷ್ಟಿಯಾಗಿತ್ತು. ಕೋಳಿ ಮಾಂಸ ಲಭ್ಯವಾಗದ ಕಾರಣದಿಂದ ಹಂದಿ ಮಾಂಸಕ್ಕೆ ಬೇಡಿಕೆ ಇತ್ತು. ಕೋಳಿ ಮಾಂಸ ಸಿಗದಿರುವುದರಿಂದ ಮೀನಿನತ್ತ ಮಾಂಸ ಪ್ರಿಯರು ಮುಖ ಮಾಡಿದರು.
ಮಾರುಕಟ್ಟೆ ಆವರಣದಲ್ಲಿ ಕೆಲವೇ ಗಂಟೆಗಳಲ್ಲಿ ತರಕಾರಿ ಖಾಲಿಯಾಯಿತು. ಟೊಮೆಟೊ, ಬೀನ್ಸ್, ಈರುಳ್ಳಿ, ನುಗ್ಗೆಕಾಯಿ, ಆಲೂಗೆಡ್ಡೆ ಕ್ಯಾಬೇಜ್, ಬಿಟ್ರೂಟ್, ಕ್ಯಾರೇಟ್ ಸೇರಿದಂತೆ ಇನ್ನಿತರ ತರಕಾರಿಗಳು ಕೆಲವೇ ಗಂಟೆಯೊಳಗೆ ಖಾಲಿಯಾಯಿತು. ಮಧ್ಯಾಹ್ನ 12ರ ವೇಳೆ ಹೊತ್ತಿಗೆ ತರಕಾರಿಗಳೆಲ್ಲ ಅಂಗಡಿಗಳಿಂದ ಖಾಲಿಯಾಗಿತ್ತು.
ವಾಹನ ದಟ್ಟಣೆ:ಅಗತ್ಯ ವಸ್ತು ಖರೀದಿ ವೇಳೆಯಲ್ಲಿ ಹೆಚ್ಚಿನ ವಾಹನ ದಟ್ಟಣೆ ಸೃಷ್ಟಿಯಾಯಿತು. ಬೆಳಿಗ್ಗೆಯಿಂದಲೇ ವಾಹನ ಸಂಚಾರ ಹೆಚ್ಚಾಗಿತ್ತು. ಬೈಕ್, ಕಾರ್ಗಳಲ್ಲಿ ಜನರು ಬಂದು ಸಾಮಗ್ರಿ ಖರೀದಿಸಿ ಹಿಂತಿರುಗಿದರು.
353 ಮಂದಿ ಹೋಂ ಕ್ವಾರಂಟೈನ್: ಕೋವಿಡ್-19ರ ಸಂಬಂಧ ಸಂಬಂಧ ಜಿಲ್ಲೆಯಿಂದ ವಿದೇಶಗಳಿಗೆ ಹೋಗಿ ಹಿಂತಿರುಗಿ ಬಂದಿರುವವರನ್ನು ಪತ್ತೆಹಚ್ಟಿ ತಪಾಸಣೆ ಮಾಡುವ ಕಾರ್ಯವನ್ನು ಮುಂದುವರಿಸಲಾಗಿದೆ. ಮಡಿಕೇರಿ ತಾಲ್ಲೂಕಿನಲ್ಲಿ 139, ವಿರಾಜಪೇಟೆ ತಾಲ್ಲೂಕಿನಲ್ಲಿ 114, ಸೋಮವಾರಪೇಟೆ ತಾಲ್ಲೂಕಿನಲ್ಲಿ 109 ಜನರನ್ನು ಪತ್ತೆ ಹಚ್ಚಲಾಗಿದೆ. ಈ ಪೈಕಿ 353 ಜನರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಅವರವರ ಮನೆಗಳಲ್ಲಿಯೇ ಸಂಪರ್ಕ ತಡೆ ಮಾಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.