ಸಿದ್ದಾಪುರ (ಕೊಡಗು): ಕಾಡಾನೆ ಹಾವಳಿ ತಡೆಗಟ್ಟಲು ಅಳವಡಿಸಿದ್ದ ಕಂಬಿಗೆ ಕಾಡಾನೆ ಸಿಲುಕಿ ಕೊನೆಗೆ ಅದರಿಂದ ಹೊರಬಂದು, ಅರಣ್ಯಕ್ಕೆ ತೆರಳಿದ ಘಟನೆ ಕುಶಾಲನಗರ ತಾಲ್ಲೂಕಿನ ವಾಲ್ನೂರು ತ್ಯಾಗತ್ತೂರು ಬಳಿ ಶನಿವಾರ ನಡೆದಿದೆ.
ವಾಲ್ನೂರು-ತ್ಯಾಗತ್ತೂರು ಗ್ರಾ.ಪಂ ವ್ಯಾಪ್ತಿಯ ನದಿ ದಡದಲ್ಲಿ ಕಾಡಾನೆ ತಡೆಗೆ ಅರಣ್ಯ ಇಲಾಖೆ ರೈಲ್ವೆ ಕಂಬಿ ಅಳವಡಿಸಿತ್ತು. ಗ್ರಾಮದ ಸುರೇಶ್ ಎಂಬುವರ ಕಾಫಿ ತೋಟದಲ್ಲಿದ್ದ ಅಂದಾಜು 25 ವರ್ಷ ಪ್ರಾಯದ ಸಲಗವೊಂದು ತೋಟದಿಂದ ಅರಣ್ಯಕ್ಕೆ ದಾಟುವಾಗ ರೈಲ್ವೆ ಕಂಬಿಗೆ ಸಿಲುಕಿಕೊಂಡಿದೆ.
ಕೆಲವು ಗಂಟೆಗಳ ಪ್ರಯತ್ನದ ಬಳಿಕ ಕಾಡಾನೆಯು ಸುರಕ್ಷಿತವಾಗಿ ಕಂಬಿಯಿಂದ ಹೊರಬಂದು ದುಬಾರೆ ಮೀಸಲು ಅರಣ್ಯಕ್ಕೆ ತೆರಳಿದೆ. ಸ್ಥಳೀಯರು ಕಾಡಾನೆಯ ಚಿತ್ರವನ್ನು ಸೆರೆಹಿಡಿದಿದ್ದಾರೆ.