ಸಿದ್ದಾಪುರ (ಕೊಡಗು): ವಾಲ್ನೂರು ಗ್ರಾಮದ ಅಮ್ಮಂಗಾಲದಲ್ಲಿ ಸೋಮವಾರ ಕಾಡಾನೆ ದಾಳಿಯಿಂದ ಪ್ರಭು ಗಣಪತಿ ಅವರ ಕಾಫಿ ತೋಟದ ಲೈನ್ಮನೆಯಲ್ಲಿ ವಾಸವಿದ್ದ ಕಾರ್ಮಿಕ ಏಳುಮಲೈ (42) ಮೃತಪಟ್ಟಿದ್ದಾರೆ.
ಬೆಳಗ್ಗಿನ ಜಾವ ಕಾವೇರಿ ನದಿಯ ಬಳಿ ನಡೆದು ತೆರಳುತ್ತಿದ್ದ ವೇಳೆ ಕಾಡಾನೆ ಏಕಾಏಕಿ ದಾಳಿ ನಡೆಸಿದೆ. ಏಳುಮಲೈ ಅವರ ಹೊಟ್ಟೆಯ ಭಾಗಕ್ಕೆ ಗಾಯವಾಗಿತ್ತು. ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟರು.
ಸ್ಥಳಕ್ಕೆ ಮಡಿಕೇರಿ ವಿಭಾಗದ ಡಿ.ಎಫ್.ಒ ಪ್ರಭಾಕರನ್, ಎ.ಸಿ.ಎಫ್ ನೆಹರು, ವಲಯ ಅರಣ್ಯಾಧಿಕಾರಿ ಅನನ್ಯ ಕುಮಾರ್, ಉಪವಲಯ ಅರಣ್ಯಾಧಿಕಾರಿ ಸುಬ್ರಾಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.