ಸೋಮವಾರಪೇಟೆ: ಕಾಜೂರು ಮೀಸಲು ಅರಣ್ಯದ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಹಗಲಿನಲ್ಲಿಯೇ ಕಾಡಾನೆಗಳು ಸಂಚರಿಸುತ್ತಿರುವುದರಿಂದ ಜನರು ಸಂಚರಿಸಲು ಮತ್ತು ಕಾಫಿ ತೋಟಗಳಲ್ಲಿ ಕೆಲಸ ಮಾಡಲು ಭಯಪಡುವಂತಾಗಿದೆ.
ಕೋವರ್ ಕೊಲ್ಲಿಯ ಟಾಟಾ ಕಾಫಿ ಸಂಸ್ಥೆಗೆ ಸೇರಿದ ಒಂಟಿ ಸಲಗವನ್ನು ಆರ್.ಆರ್.ಟಿ ಸಿಬ್ಬಂದಿ ಹಾಗೂ ಅರಣ್ಯ ರಕ್ಷಕರು ಕಾಡಿಗಟ್ಟಲು ಮುಂದಾದ ಸಂದರ್ಭ ಅವರ ಮೇಲೆ ದಾಳಿಗೆ ಮುಂದಾದ ಕಾಡಾನೆಯಿಂದ ಸಂದರ್ಭ ಕೂದಲೆಳೆ ಅಂತರದಿಂದ ಪಾರಾದ ಘಟನೆ ಕಾಜೂರು ಅರಣ್ಯ ಪ್ರದೇಶದ ಹೆದ್ದಾರಿಯಲ್ಲಿ ಶನಿವಾರ ಬೆಳಿಗ್ಗೆ ನಡೆದಿತ್ತು.
ಭಾನುವಾರ ಕಾಜೂರಿನ ಆರ್.ಆರ್.ಟಿ. ಸಿಬ್ಬಂದಿ ಹಾಗೂ ಅರಣ್ಯ ರಕ್ಷಕರು ತಂಗಿರುವ ವಸತಿಗೃಹದ ಬಳಿಗೆ ಬಂದ ಕಾಡಿಗೆ ಹಿಂದಿರುಗಿದೆ. ಒಂಟಿ ಕಾಡಾನೆ ಹಗಲಿನಲ್ಲಿಯೇ ಓಡಾಡುತ್ತಿರುವುದರಿಂದ ದ್ವಿ ಚಕ್ರ ವಾಹನ ಸವಾರರು ಮತ್ತು ಕೂಲಿ ಕಾರ್ಮಿಕರು ಭಯದಿಂದಲೇ ಇಲ್ಲಿ ಸಂಚರಿಸಬೇಕಾಗಿದೆ’ ಎಂದು ಕಾರ್ಮಿಕ ಹರೀಶ್ ತಿಳಿಸಿದರು.
ಕಾಡಾನೆಗೆ ಮದ ಬಂದಿದ್ದು, ಎರಡು ದಿನಗಳ ಕಾಲ ಅದರ ಮೇಲೆ ನಿಗಾ ಇರಿಸಲಾಗುವುದು. ಪೂರ್ಣ ಮಾಹಿತಿಯನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಡಿಆರ್ಎಫ್ಒ ಜಗದೀಶ್ ತಿಳಿಸಿದರು.
ಸೋಮವಾರಪೇಟೆ ಸಮೀಪದ ಕಾಜೂರಿನ ಅರಣ್ಯ ಇಲಾಖೆಯ ವಸತಿ ಗೃಹದ ಬಳಿಗೆ ಭಾನುವಾರ ಕಾಡಾನೆ ಬಂದು ಹಿಂದಿರುಗುತ್ತಿರುವ ಚಿತ್ರವನ್ನು ಅರಣ್ಯ ಆರ್ ಆರ್ ಟಿ ಸಿಬ್ಬಂದಿಗಳು ವಸತಿಗೃಹದೊಳಗಿಂದ ಸೆರೆಹಿಡಿದಿರುವುದು.