ನಾಲ್ಕೈದು ದಿನಗಳಿಂದ ಬಿಡುವು ನೀಡುತ್ತಾ ಸಾಧಾರಣವಾಗಿ ಸುರಿಯುತ್ತಿದ್ದ ಮಳೆಗೆ ಮೆಣಸಿನಕಾಯಿ ಕೊಳೆಯುವ ಭಯದಿಂದ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳ ರೈತರು ಮೆಣಸಿನಕಾಯಿ ಕೊಯ್ಲು ಮಾಡಿದ್ದರು. ಮಾರುಕಟ್ಟೆಗೆ ಒಂದೂವರೆ ಲೋಡ್ ಮೆಣಸಿನಕಾಯಿ ತಂದಿದ್ದರು. ಹೊರ ಜಿಲ್ಲೆ, ರಾಜ್ಯಕ್ಕೆ ರವಾನಿಸುವಾಗ ಕೊಳೆಯಬಹುದೆಂಬ ಶಂಕೆಯಿಂದ ವ್ಯಾಪಾರಿಗಳು ದಿಢೀರ್ ದರ ಕಡಿಮೆ ಮಾಡಿದರು. ‘ಇನ್ನು ಎರೆಡು ವಾರ ಮೆಣಸಿನಕಾಯಿ ಕೊಯ್ಯಬಹುದು. ಹದವಾಗಿ ಮಳೆಯಾಗುತ್ತಿದ್ದು ಭತ್ತದ ಬೀಜ ಬಿತ್ತನೆಗೂ ಸಕಾಲ, ಹಾಗಾಗಿ ಮೆಣಸಿನಕಾಯಿ ಗಿಡ ಸಹಿತ ಗದ್ದೆ ಉಳುಮೆ ಮಾಡಲಾಗುವುದು. ಕಳೆದೆರೆಡು ವರ್ಷಗಳಲ್ಲಿ ಕೋವಿಡ್-ಲಾಕ್ ಡೌನ್ ನಿಂದ ಮೆಣಸಿನಕಾಯಿ ಬೆಳೆದ ರೈತ ನಷ್ಟ ಅನುಭವಿಸಿದ್ದ. ಈ ವರ್ಷವಾದರೂ ಉತ್ತಮ ದರ ದೊರೆಯಬಹುದು ಎಂಬ ಆಸೆಯಿಂದ ಬೆಳೆದ ರೈತನಿಗೆ ಭಾರಿ ನಿರಾಶೆಯಾಯಿತು. ಅಸಲೂ ದಕ್ಕಲಿಲ್ಲ. ವಾಡಿಕೆಯಂತೆ ಬೆಳೆಯುವ ಭತ್ತದ ವ್ಯವಸಾಯದ ಸಿದ್ಧತೆಯನ್ನಾದರೂ ಮಾಡಿಕೊಳ್ಳುತ್ತೇವೆ’ ಎಂದು ಕಾಜೂರು ಗ್ರಾಮದ ಪ್ರಗತಿಪರ ಕೃಷಿಕ ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದರು.