ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಡಿಕೇರಿ | ಮಾಂದಲ್‌ಪಟ್ಟಿಗೆ ಜೀಪ್ ನಿರ್ಬಂಧ ಬೇಡ

ಜೀಪ್‌ ಮಾಲೀಕರು ಮತ್ತು ಚಾಲಕರ ಒತ್ತಾಯ
Published 9 ಜನವರಿ 2024, 7:34 IST
Last Updated 9 ಜನವರಿ 2024, 7:34 IST
ಅಕ್ಷರ ಗಾತ್ರ

ಮಡಿಕೇರಿ: ಇಲ್ಲಿಗೆ ಸಮೀಪದ ಪ್ರವಾಸಿತಾಣ ಮಾಂದಲ್‌ಪಟ್ಟಿಗೆ ಪ್ರವಾಸಿಗರನ್ನು ಕರೆದೊಯ್ಯಲು ಜೀಪ್‌ಗಳಿಗೆ ಹೇರಿರುವ ನಿರ್ಬಂಧವನ್ನು ತೆರವುಗೊಳಿಸಬೇಕು ಎಂದು ಮಾಂದಲ್ ಪಟ್ಟಿ ಜೀಪ್ ಮಾಲೀಕರು ಹಾಗೂ ಚಾಲಕರು ಒತ್ತಾಯಿಸಿದರು.

ಒಂದು ವೇಳೆ ನಿರ್ಬಂಧ ತೆರವುಗೊಳಿಸದೇ ಪ್ರಾದೇಶಿಕ ಸಾರಿಗೆ ಕಚೇರಿ ಮುಂದೆ ಕುಟುಂಬದ ಸಮೇತ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

ಈ ವೇಳೆ ಮಾತನಾಡಿದ ಚಾಲಕರ ಕಾನೂನು ಸಲಹೆಗಾರ ಯಾಲದಾಳು ಮನೋಜ್ ಬೋಪಯ್ಯ, ‘ಈ ವೃತ್ತಿಯನ್ನೇ ನಂಬಿಕೊಂಡು ಚಾಲಕರು ಜೀವನ ಮಾಡುತ್ತಿದ್ದಾರೆ. ಕಾನೂನಿನಡಿ ಇರುವ ಅವಕಾಶವನ್ನು ಬಳಸಿಕೊಂಡೇ ಅನುಮತಿ ನೀಡಬಹುದಾಗಿದೆ. ಈ ಕುರಿತು ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು’ ಎಂದರು.

ಸಾಲ ಮಾಡಿ ಜೀಪ್ ಖರೀದಿಸಲಾಗಿದೆ. ಇದೀಗ ದಿಢೀರ್ ಆಗಿ ನಿರ್ಬಂಧ ಹೇರಿರುವುದರಿಂದ ಸಾಲ ತೀರಿಸಲಾಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ನಿಯಮ ಉಲ್ಲಂಘನೆ ಮಾಡುವ, ಅತಿ ಹೆಚ್ಚಿನ ದರ ತೆಗೆದುಕೊಳ್ಳುವುದು ಹಾಗೂ ಅತಿವೇಗದಿಂದ ಚಾಲನೆ ಮಾಡುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ‘ಯಾರು ಅತಿವೇಗದಲ್ಲಿ ಚಾಲನೆ ಮಾಡುತ್ತಾರೋ, ನಿಯಮ ಮೀರಿ ದುಪ್ಪಟ್ಟು ದರ ಪಡೆಯುತ್ತಾರೋ, ನಿಯಮಗಳನ್ನು ಉಲ್ಲಂಘಿಸುತ್ತಾರೋ ಅವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ. ಆದರೆ, ನಿಯಮ ಪಾಲಿಸುವ ಬಡ ಚಾಲಕರ ಮೇಲೆ ಕ್ರಮ ಏಕೆ’ ಎಂದು ಪ್ರಶ್ನಿಸಿದರು.

ಚಾಲಕರಾದ ಎಸ್.ಯು.ತಮ್ಮಯ್ಯ, ಟಿ.ಬಿ.ಚೇತನ್, ಎ.ಬಿ.ಲೋಕೇಶ್ ಹಾಗೂ ಶಹಬಾಜ್‌ ಆಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT