ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು: ನದಿ ಕಲ್ಲುಗಳ ಮೇಲೆ ಪ್ರಯಾಸದ ನಡಿಗೆ, ಪ್ರವಾಸಿಗರಿಗೆ ನಿರಾಸೆ

ದುಬಾರೆ: ಕಾವೇರಿ ನಿಸರ್ಗಧಾಮದಲ್ಲಿ ಸ್ಥಗಿತಗೊಂಡ ದೋಣಿ ವಿಹಾರ
Last Updated 2 ಜೂನ್ 2022, 5:27 IST
ಅಕ್ಷರ ಗಾತ್ರ

ಕುಶಾಲನಗರ: ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ದುಬಾರೆ ಕಾವೇರಿ ನಿಸರ್ಗಧಾಮದಲ್ಲಿ ಪ್ರವಾಸೋದ್ಯಮ ಹಾಗೂ ಅರಣ್ಯ ಇಲಾಖೆ ನಿರ್ಲಕ್ಷ್ಯದಿಂದ ದೋಣಿ ವಿಹಾರ ಮತ್ತು ಆನೆ ಸಫಾರಿ ಸ್ಥಗಿತಗೊಂಡಿದ್ದು, ಪ್ರವಾಸಿಗರಿಗೆ ನಿರಾಸೆ ಉಂಟು ಮಾಡಿದೆ.

ಇದರಿಂದಾಗಿ ಪ್ರವಾಸಿಗರು ಪಾಚಿ ತುಂಬಿದ ಅಪಾಯಕಾರಿ ನದಿಯ ಕಲ್ಲುಗಳ ಮೇಲೆ ನಡೆದೇ ನದಿ ದಾಟಿ ದುಬಾರೆ ಸಾಕಾನೆ ಶಿಬಿರ ತಲುಪುತ್ತಿದ್ದಾರೆ.

ಪ್ರವಾಸಿಗರು ನಡೆದು ಹೋಗುವ ಸಂದರ್ಭ ಜಾರಿ ಬಿದ್ದು, ಅನೇಕರಿಗೆ ಗಾಯಗಳಾಗಿವೆ. ಮಕ್ಕಳು ಹಾಗೂ ವಯೋವೃದ್ಧರು ದಾಟಲು ಸಾಧ್ಯವಾಗದೆ ನಿರಾಶೆಯಿಂದ ಹಿಂತಿರುಗುತ್ತಿದ್ದಾರೆ. ಇದು ತಿಳಿದಿದ್ದರೂ ಇಲಾಖೆ ಪ್ರವಾಸಿಗರು ಹಾಗೂ ಗಿರಿಜನ ಹಾಡಿಯ ಜನರಿಗೆ ಮಾತ್ರ ದೋಣಿ ಸೌಲಭ್ಯ ಕಲ್ಪಿಸಿಲ್ಲ.

‘ನದಿಯಲ್ಲಿ ನೀರಿನ ಹರಿವು ಕ್ಷೀಣಿಸಿದ ಹಿನ್ನೆಲೆಯಲ್ಲಿ ದೋಣಿ ಸಂಚಾರ ಸಾಧ್ಯವಾಗುತ್ತಿಲ್ಲ. ಒಂದು ದೋಣಿಯ ಮೋಟಾರು ಕಲ್ಲಿಗೆ ಡಿಕ್ಕಿ ಹೊಡೆದು ಹಾನಿಯಾಗಿದೆ, ಈ ಹಿನ್ನೆಲೆಯಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ’ ಎಂದು ವಲಯ ಅರಣ್ಯಾಧಿಕಾರಿ ಶಿವರಾಮ್ ತಿಳಿಸಿದ್ದಾರೆ.

ಕಾವೇರಿ ನದಿಯಲ್ಲಿ ಜಂಗಲ್ ಲಾಡ್ಜ್‌‌ಗೆ ಸೇರಿದ ದೋಣಿಗಳು ಎಂದಿನಂತೆ ಸಂಚಾರ ನಡೆಸುತ್ತಿವೆ. ಇವುಗಳ ಮೂಲಕ ಅರಣ್ಯ ಅಧಿಕಾರಿಗಳು ಹಾಗೂ ಗಣ್ಯ ವ್ಯಕ್ತಿಗಳು ನಿತ್ಯ ಸಂಚಾರ ನಡೆಸುತ್ತಿದ್ದಾರೆ.

ಆನೆ ವೀಕ್ಷಣೆಗೆ ಸಮಯ ನಿಗದಿ: ವಿವಿಧಡೆ ಪುಂಡಾಟ ನಡೆಸುತ್ತಿದ್ದ ಕಾಡಾನೆಗಳನ್ನು ಸೆರೆಹಿಡಿದು ಇಲ್ಲಿ ಪಳಗಿಸಲಾಗುತ್ತದೆ. ಈಗಾಗಲೇ ಈ ಶಿಬಿರದಲ್ಲಿ 35 ಆನೆಗಳಿವೆ. ಇವುಗಳ ಚಟುವಟಿಕೆ ವೀಕ್ಷಿಸಲು ಅರಣ್ಯ ಇಲಾಖೆ ಬೆಳಿಗ್ಗೆ 9ರಿಂದ 11.30 ಹಾಗೂ ಸಂಜೆ 4ರಿಂದ 5.30ರ ನಡುವೆ ಸಮಯ ನಿಗದಿಪಡಿಸಲಾಗಿದೆ. ಬೆಳಿಗ್ಗೆ ಆನೆಗಳಿಗೆ ಮಜ್ಜನ ಮಾಡಿಸುವುದರಿಂದ ಆರಂಭಗೊಂಡು ಅವುಗಳಿಗೆ ಆಹಾರ ನೀಡುವುದೂ ಸೇರಿದಂತೆ ಮಾವುತರಿಂದ ಆನೆಗಳ ದಿನಚರಿ ತಿಳಿದು, ಅವುಗಳ ಜೊತೆ ಸೆಲ್ಫಿ ತೆಗೆದು ಸಂಭ್ರಮಿಸುತ್ತಾರೆ. ಇದಲ್ಲದೆ, ಕಾವೇರಿ ನದಿಯಲ್ಲಿ ರಿವರ್ರ‍್ಯಾಫ್ಟಿಂಗ್, ಸಾಹಸ ಜಲಕ್ರೀಡೆ, ದೋಣಿ ವಿಹಾರ, ಕುದುರೆ ಸವಾರಿ, ಆದಿವಾಸಿಗಳ ಜೀವನ ಶೈಲಿ, ಇಲ್ಲಿನ ಪ್ರಕೃತಿ ಸೌಂದರ್ಯ ಪ್ರವಾಸಿಗರ ಪ್ರಮುಖ ಆಕರ್ಷಣೆಗಳಾಗಿವೆ.

ತೂಗು ಸೇತುವೆ ನಿರ್ಮಾಣಕ್ಕೆ ಒತ್ತಾಯ: ದುಬಾರೆಯಲ್ಲಿ ನದಿಗೆ ಅಡ್ಡಲಾಗಿ ತೂಗು ಸೇತುವೆ ನಿರ್ಮಿಸಬೇಕು ಎಂಬ ಒತ್ತಾಯ ಅನೇಕ ವರ್ಷಗಳಿಂದ ಕೇಳಿ ಬರುತ್ತಿದೆ. ಸೇತುವೆ ನಿರ್ಮಾಣವಾದರೆ ದುಬಾರೆ ಸಾಕಾನೆ ಶಿಬಿರಕ್ಕೆ ಪ್ರವಾಸಿಗರು ತೂಗು ಸೇತುವೆ ಮೂಲಕವೇ ಹೋಗಬಹುದು. ಸೇತುವೆ ನಿರ್ಮಾಣವಾದರೆ ಪ್ರವಾಸಿಗರಿಗೆ ಮಾತ್ರವಲ್ಲ, ದುಬಾರೆಯಲ್ಲಿ ಸುಮಾರು 40ರಿಂದ 50 ಗಿರಿಜನ ಕುಟುಂಬಗಳಿಗೂ ಅನುಕೂಲವಾಗುತ್ತದೆ ಎಂಬುದು ಸ್ಥಳೀಯರ ಒತ್ತಾಯ.

ಆನೆ ಸಫಾರಿ ಸ್ಥಗಿತ: ದುಬಾರೆ ಸಾಕಾನೆ ಶಿಬಿರದಲ್ಲಿ ಆನೆ ಸಫಾರಿ ಸ್ಥಗಿತಗೊಳಿಸಲಾಗಿದೆ. ಈ ಹಿಂದೆ ಪ್ರವಾಸಿಗರಿಗೆ ಸಫಾರಿ ಮೂಲಕ ದುಬಾರೆ ಅರಣ್ಯ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುತ್ತಿತ್ತು. ಇದೀಗ ಸಫಾರಿಯೂ ಇಲ್ಲ, ದೋಣಿ ವಿಹಾರವು‌ ಇಲ್ಲದಂತಾಗಿದೆ.

ಜಂಗಲ್ ಲಾಡ್ಜ್ ದೋಣಿಗಳ ಸಂಚಾರಿಸುವ ಸ್ಥಳದಲ್ಲಿಯೇ ಅರಣ್ಯ ಇಲಾಖೆಯ ದೋಣಿಗಳ ಮೂಲಕ ಪ್ರವಾಸಿಗರನ್ನು ದುಬಾರೆ ದೀಪಕ್ಕೆ ಕರೆದುಕೊಂಡು ಹೋಗಲು ವ್ಯವಸ್ಥೆ ಮಾಡಬೇಕು ಎಂದು ಕೇರಳದ ಪ್ರವಾಸಿಗ ಕಣ್ಣನ್ ಒತ್ತಾಯಿಸಿದ್ದಾರೆ.

ಪ್ರವಾಸಿಗರ ಅಚ್ಚುಮೆಚ್ಚಿನ ತಾಣ: ಜಿಲ್ಲೆಯ ಪ್ರವಾಸಿ ತಾಣಗಳ ಪೈಕಿ ಒಂದಾದ ಕಾವೇರಿ ನಿಸರ್ಗಧಾಮ ಜೀವನದಿ ಕಾವೇರಿ ಸೃಷ್ಟಿಸಿದ ದ್ವೀಪಗಳಲ್ಲಿ ಒಂದಾಗಿದೆ. ತನ್ನದೇ ಆದ ವೈಶಿಷ್ಟ್ಯಗಳಿಂದ ಪ್ರವಾಸಿಗರನ್ನು ಸೆಳೆಯುತ್ತಿದೆ. ಮಳೆಗಾಲ ಕಳೆಯುತ್ತಿದ್ದಂತೆ ಪ್ರವಾಸಿಗರ ದಂಡು ಇಲ್ಲಿಗೆ ಬರುವುದರಿಂದ ನಿಸರ್ಗಧಾಮ ತುಂಬಿ ತುಳುಕುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT