ಮಡಿಕೇರಿ: ಕೊಡಗು ಜಿಲ್ಲೆಯ ಸಿದ್ದಾಪುರ ಭಾಗದಲ್ಲಿ ಜನವಸತಿ ಪ್ರದೇಶಗಳತ್ತ ಪದೇ ಪದೇ ದಾಳಿ ನಡೆಸುತ್ತಿದ್ದ ದಕ್ಷ ಎಂಬ ಗಂಡಾನೆಯನ್ನು ಬುಧವಾರ ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದರು.
30 ವರ್ಷದ ಈ ಆನೆ ಸೆರೆಗೆ ಮಂಗಳವಾರದಿಂದ ಒಟ್ಟು 8 ಸಾಕಾನೆಗಳ ನೆರವಿನಿಂದ ನೂರಕ್ಕೂ ಅಧಿಕ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದರು. ಎಮ್ಮೆಗುಂಡಿ ಬಳಿ ಪತ್ತೆಯಾದ ಈ ಆನೆಯ ಬೆನ್ನತ್ತಿದ ಸಿಬ್ಬಂದಿ ಸುಮಾರು 5 ಕಿ.ಮೀ ದೂರದವರೆಗೂ ಸಾಗಿ, ಮಾಲ್ದಾರೆ ಅರಣ್ಯ ಪ್ರದೇಶದ ಗಡಿಯಲ್ಲಿ ಅರಿವಳಿಕೆ ಚುಚ್ಚುಮದ್ದು ನೀಡಿದರು. ಸಮೀಪದ ಕೆರೆಯೊಂದರಲ್ಲಿ ಒರಗಿದ ಈ ಆನೆಗೆ ರೇಡಿಯೊ ಕಾಲರ್ ಅಳವಡಿಸಿ, ಅಲ್ಲಿಗೆ 80 ಕಿ.ಮೀ ದೂರದ ನಾಗರಹೊಳೆ ಅರಣ್ಯ ಪ್ರದೇಶದ ಮಧ್ಯದಲ್ಲಿರುವ ಬಿಸಿಲವಾಡಿ ಕೆರೆಯ ಸಮೀಪ ಇದನ್ನು ಬಿಡಲಾಗುವುದು ಎಂದು ಡಿಸಿಎಫ್ ಜಗನ್ನಾಥ್ ತಿಳಿಸಿದರು.
ಸಾಕಾನೆ ಶಿಬಿರಗಳಲ್ಲಿ ಆನೆಗಳ ಸಂಖ್ಯೆ ಹೆಚ್ಚಿರುವುದರಿಂದ ಈ ಕಾಡಾನೆಯನ್ನು ಮತ್ತೆ ಕಾಡಿಗೆ ಬಿಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಸಿದ್ದಾಪುರ ಭಾಗದಲ್ಲಿ ಉಪಟಳ ನೀಡುತ್ತಿರುವ ಆಕಾಂಕ್ಷಾ ಮತ್ತು ಮೀರಾ ಎಂಬ ಕಾಡಾನೆಗಳಿಗೂ ರೇಡಿಯೊ ಕಾಲರ್ ಅಳವಡಿಸಬೇಕಿದ್ದು, ಇದಕ್ಕಾಗಿ ಕಾರ್ಯಾಚರಣೆ ನಡೆಯುತ್ತಿದೆ.