ಮಡಿಕೇರಿ: ವಿಧಾನ ಪರಿಷತ್ಗೆ ನಡೆಯಲಿರುವ ಚುನಾವಣೆಯಲ್ಲಿ ಕೊಡಗು ಕ್ಷೇತ್ರದ ಅಭ್ಯರ್ಥಿ ಆಯ್ಕೆಗೆ ಬಿಜೆಪಿಯಲ್ಲಿ ತಳಮಳ ಆರಂಭವಾಗಿದ್ದರೆ, ಕಾಂಗ್ರೆಸ್ನಲ್ಲಿ ಸ್ಥಳೀಯ ಅಭ್ಯರ್ಥಿಗೇ ಟಿಕೆಟ್ ನೀಡಬೇಕೆಂದು ಮುಖಂಡರು ಪಟ್ಟು ಹಿಡಿದಿದ್ದಾರೆ. ಜಿಲ್ಲೆಯಲ್ಲಿ ಭದ್ರ ನೆಲೆಯಿಲ್ಲದ ಕಾರಣಕ್ಕೆ ಜೆಡಿಎಸ್ನಲ್ಲಿ ರಾಜಕೀಯ ಚಟುವಟಿಕೆ ಇನ್ನೂ ಬಿರುಸು ಪಡೆದಿಲ್ಲ.
ಬಿಜೆಪಿಯಲ್ಲಿ 10ಕ್ಕೂ ಹೆಚ್ಚು ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದು, ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಸಹೋದರ ಸುಜಾ ಕುಶಾಲಪ್ಪ ಪ್ರಬಲವಾಗಿ ಲಾಬಿ ನಡೆಸುತ್ತಿದ್ದಾರೆ. ಅವರ ಮತ್ತೊಬ್ಬ ಸಹೋದರ ಎಂ.ಪಿ.ಸುನಿಲ್ ಸುಬ್ರಮಣಿ ಈ ಕ್ಷೇತ್ರದಿಂದಲೇ ಕಳೆದ ಬಾರಿ ಜಯಿಸಿ ಮೇಲ್ಮನೆಗೆ ಆಯ್ಕೆಯಾಗಿದ್ದರು. ಕಾನೂನು ತೊಡಕಿನಿಂದ ಸುಜಾ ಕುಶಾಲಪ್ಪಗೆ ಅಂದು ಸ್ಪರ್ಧಿಸಲು ಸಾಧ್ಯವಾಗಿರಲಿಲ್ಲ. ತಮ್ಮ ಸುನಿಲ್ಗೆ ಟಿಕೆಟ್ ಸಿಕ್ಕಿತ್ತು. ಈಗ ಕ್ಷೇತ್ರ ಬಿಟ್ಟುಕೊಡುವಂತೆ ಸುಜಾ ಪಟ್ಟು ಹಿಡಿದಿರುವುದು ತಮ್ಮನಿಗೆ ನುಂಗಲಾರದ ತುತ್ತಾಗಿದೆ. ಸಹೋದರರಲ್ಲಿ ಯಾರಿಗೆ ಟಿಕೆಟ್ ಎಂಬ ಚರ್ಚೆ ಜಿಲ್ಲೆಯಲ್ಲಿ
ನಡೆಯುತ್ತಿದೆ.
ಶಾಸಕ ಕೆ.ಜಿ.ಬೋಪಯ್ಯ ಅವರ ಆತ್ಮೀಯ, ಪಶ್ಚಿಮಘಟ್ಟಗಳ ಕಾರ್ಯಪಡೆ ಅಧ್ಯಕ್ಷ ರವಿ ಕುಶಾಲಪ್ಪ ಹೆಸರೂ ಕೇಳಿ ಬರುತ್ತಿದೆ.
‘ಪಕ್ಷ ಹೇಳಿದಂತೆ ಕೇಳುವ ವ್ಯಕ್ತಿ ನಾನು. ಪಕ್ಷ ಅವಕಾಶ ಕೊಟ್ಟರೆ ಮತ್ತೆ ಸ್ಪರ್ಧಿಸುತ್ತೇನೆ. ಇಲ್ಲದಿದ್ದರೆ ಸುಮ್ಮನಿರುತ್ತೇನೆ’ ಎಂದು ಸುನಿಲ್ ಆಪ್ತರೊಂದಿಗೆ ಹೇಳಿಕೊಂಡಿದ್ದಾರೆ
ಮಾಜಿ ಸಚಿವ ಎ.ಮಂಜು ಅವರ ಪುತ್ರ, ಹಾಸನದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಂಥರ್ಗೌಡ ಕಾಂಗ್ರೆಸ್ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ರಾಜ್ಯ ವರಿಷ್ಠರ ಪಟ್ಟಿಯಲ್ಲೂ ಅವರ ಹೆಸರಿದೆ ಎನ್ನಲಾಗಿದೆ. ಕೆಪಿಸಿಸಿ ಪ್ರಧಾನ ಹುದ್ದೆಯಲ್ಲಿರುವ ಜಿಲ್ಲೆಯ ಮುಖಂಡರೊಬ್ಬರು ಮಂಥರ್ ಪರ ಲಾಬಿ ನಡೆಸುತ್ತಿದ್ದಾರೆ. ಆದರೆ, ಸ್ಥಳೀಯ ಕಾಂಗ್ರೆಸ್ ಮುಖಂಡರು ಜಿಲ್ಲೆಯ ಅಭ್ಯರ್ಥಿಗೇ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದಿದ್ದ ಸಭೆಯಲ್ಲಿ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ಕೆ.ಎಂ.ಲೋಕೇಶ್ಗೆ ಟಿಕೆಟ್ ನೀಡಬೇಕೆಂಬ ತೀರ್ಮಾನಕ್ಕೆ ಬರಲಾಗಿದೆ. ರಾಜ್ಯ ವರಿಷ್ಠರಿಗೂ ಲೋಕೇಶ್ ಹೆಸರೊಂದನ್ನು ಶಿಫಾರಸು ಮಾಡಲಾಗಿದೆ. ಈ ಹಿಂದೆ ಮಡಿಕೇರಿ ವಿಧಾನಸಭೆ ಕ್ಷೇತ್ರದಿಂದ ಲೋಕೇಶ್ ಸ್ಪರ್ಧಿಸಿ ಪರಾಭವಗೊಂಡಿದ್ದರು.
‘ಆರಂಭದಲ್ಲಿ ಅವರು ಸ್ಪರ್ಧೆಗೆ ಉತ್ಸಾಹ ತೋರಿಸಿರಲಿಲ್ಲ. ಈಗ ಸ್ಪರ್ಧೆಗೆ ನಿರ್ಧರಿಸಿದ್ದಾರೆ’ ಎಂದು ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಬೆಂಬಲಿತರ ಪ್ರಾಬಲ್ಯವಿದೆ. ಜಿಲ್ಲೆಯಲ್ಲಿ 1,334 ಮಂದಿಗೆ ಹಕ್ಕು ಚಲಾವಣೆಯ ಅವಕಾಶವಿದೆ. ಬಿಜೆಪಿಯು ಕ್ಷೇತ್ರ ಉಳಿಸಿಕೊಳ್ಳುವ ತವಕದಲ್ಲಿದೆ. ಈ ಕ್ಷೇತ್ರವನ್ನು ಕಾಂಗ್ರೆಸ್ ವಶಕ್ಕೆ ಪಡೆಯಲು ಕಸರತ್ತು ನಡೆಸುತ್ತಿದೆ.
***
ಸ್ಥಳೀಯ ಅಭ್ಯರ್ಥಿಗೇ ಟಿಕೆಟ್ ನೀಡುವಂತೆ ನಿರ್ಣಯ ಕೈಗೊಂಡು ವರಿಷ್ಠರಿಗೆ ಹೆಸರು ಶಿಫಾರಸು ಮಾಡಲಾಗಿದೆ. ವರಿಷ್ಠರು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ
-ಧರ್ಮಜ ಉತ್ತಪ್ಪ, ಕಾರ್ಯಾಧ್ಯಕ್ಷ, ಜಿಲ್ಲಾ ಕಾಂಗ್ರೆಸ್
***
ಸ್ಥಳೀಯ ಸಂಸ್ಥೆಗಳಲ್ಲಿ ನಮ್ಮ ಪ್ರಾಬಲ್ಯವಿಲ್ಲ. ಆದರೂ, ನಮ್ಮ ಅಭ್ಯರ್ಥಿ ಸ್ಪರ್ಧಿಸುವುದು ಖಚಿತ
-ಕೆ.ಎಂ.ಬಿ.ಗಣೇಶ್, ಜಿಲ್ಲಾ ಅಧ್ಯಕ್ಷ, ಜೆಡಿಎಸ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.