ಸುಂಟಿಕೊಪ್ಪ: ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ವ್ಯವಸ್ಥೆಗಾಗಿ ಹರದೂರು ಹಿನ್ನೀರು ಪ್ರದೇಶವಾದ ಹಾರ್ ಬೈಲ್ ಮೂಲಕ ಸುಂಟಿಕೊಪ್ಪದವರೆಗೆ ಗುಂಡಿಗಳನ್ನು ಅಗೆದು ಪೈಪ್ಗಳನ್ನು ಅಳವಡಿಸುವ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಮಾದಾಪುರ ರಸ್ತೆಯ ಕೆಂಚಟ್ಟಿ ಬಳಿ ಚರಂಡಿ ಅಗೆಯುವ ವೇಳೆ ರಸ್ತೆ ಬದಿಯ ಮಣ್ಣು ಕುಸಿದು ತೊಂದರೆಯಾಗಿದೆ.
ಕಾಮಗಾರಿಯಿಂದ ಮಾದಾಪುರ ರಸ್ತೆಯಲ್ಲಿರುವ ಸ್ವಸ್ಥ ವಿಶೇಷ ಶಾಲೆಗೆ ತೆರಳುವ ಮುಖ್ಯ ರಸ್ತೆಯಲ್ಲಿ ಅಲ್ಲಲ್ಲಿ ಗುಂಡಿ ಬಿದ್ದಿರುವುದರಿಂದ ಮಳೆ ಸುರಿದ ಕೆಲವೇ ಕ್ಷಣದಲ್ಲಿ ರಸ್ತೆಯು ನೀರಿನಿಂದ ಆವೃತ್ತವಾಗಿ ವಾಹನ ಚಾಲಕರಿಗೆ ಅಡ್ಡಿ ಉಂಟಾಗುತ್ತಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡಿದ್ದರೂ ಯಾವುದೇ ಉಪಯೋಗವಾಗಿಲ್ಲ ಎಂದು ಸ್ಥಳೀಯ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದರು.
ಕಾಮಗಾರಿ ಕೈಗೆತ್ತಿಕೊಂಡಿರುವ ಎಂಜಿನಿಯರ್ ಇತ್ತ ಗಮನಹರಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಸುಂಟಿಕೊಪ್ಪದ ಜನತೆಗೆ ಕುಡಿಯುವ ನೀರಿನ ಕಾಮಗಾರಿ ಪೈಪ್ಗಳ ಅಳವಡಿಕೆ ಜಾಗದಲ್ಲಿ ಗುಂಡಿಗಳು ಬಿದ್ದ ಪರಿಣಾಮ ಮಂಗಳವಾರ ಸುರಿದ ಮಳೆಗೆ ಜಲಾವೃತಗೊಂಡಿತು