ಮಡಿಕೇರಿ: ಪೊನ್ನಂಪೇಟೆ ತಾಲ್ಲೂಕಿನ ಮುಗುಟಗೇರಿ ಗ್ರಾಮದಲ್ಲಿ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ, ಆರು ಮಂದಿಯನ್ನು ಸಜೀವವಾಗಿ ದಹಿಸಿ ಪರಾರಿಯಾಗಿದ್ದ ಆರೋಪಿ ಬೋಜ (50) ಮೃತದೇಹ ಮಂಗಳವಾರ ಬೆಳಿಗ್ಗೆ ಪತ್ತೆಯಾಗಿದೆ.
ಮುಗುಟಗೇರಿ ಗ್ರಾಮದ ನರೇಶ್ ಅವರ ಕಾಫಿ ತೋಟದಲ್ಲಿ ಮೃತದೇಹ ಪತ್ತೆಯಾಗಿದ್ದು, ಆರೋಪಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಏನಿದು ಘಟನೆ?:
ಮದ್ಯದ ಅಮಲಿನಲ್ಲಿದ್ದ ಬೋಜ, ತನ್ನ ಕುಟುಂಬದವರು ವಾಸವಾಗಿದ್ದ ಮನೆಗೇ ಶನಿವಾರ ನಸುಕಿನಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದ. ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ನಾಲ್ವರು ಮಕ್ಕಳು ಹಾಗೂ ಆರೋಪಿಯ ಪತ್ನಿಯೂ ಸೇರಿದಂತೆ ಆರು ಮಂದಿ ಮೃತಪಟ್ಟಿದ್ದರು.
ಆರೋಪಿ ಬೋಜ ಹಾಗೂ ಆತನ ಪತ್ನಿ ಬೇಬಿ ನಡುವೆ ಗಲಾಟೆ ನಡೆದು ಅದರ ಸೇಡಿಗೆ ಕುಟುಂಬಸ್ಥರು ನಿದ್ರಿಸುತ್ತಿದ್ದ ವೇಳೆ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಾಕಿದ್ದ.
ಆರೋಪಿಯ ಪತ್ನಿ ಬೇಬಿ (40), ಪಣಿ ಎರವರ ಸೀತೆ (45) ಹಾಗೂ ಮಕ್ಕಳಾದ ಪ್ರಾರ್ಥನಾ (6), ಪ್ರಕಾಶ್ (6), ವಿಶ್ವಾಸ್ (3) ಸೇರಿ ಆರು ಮಂದಿ ಮೃತಪಟ್ಟಿದ್ದರು. ಮಂಜು ಹಾಗೂ ತೋಲ ಅಪಾಯದಿಂದ ಪಾರಾಗಿದ್ದರು.