ಶನಿವಾರಸಂತೆ: ಕೊಡ್ಲಿಪೇಟೆ ಹೋಬಳಿಯ ನಿಲುವಾಗಿಲು ಗ್ರಾಮದ ಮನೆಯೊಂದರ ಹಿಂಭಾಗದ ತೋಟದಲ್ಲಿ ಗಾಂಜಾ ಬೆಳೆಸಿದ್ದ ಆರೋಪಿಯನ್ನು ಶನಿವಾರಸಂತೆ ಪೊಲೀಸರು ಬಂಧಿಸಿ 960 ಗ್ರಾಂ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿಯಂತೆ ಪಿಎಸ್ಐ ಎಚ್.ಈ.ದೇವರಾಜ್ ಹಾಗೂ ಸಿಬ್ಬಂದಿ ದಾಳಿ ಮಾಡಿ ಭದ್ರಮ್ಮ ಅವರ ಮನೆಯ ಕೆಲಸ ಮಾಡಿಕೊಂಡಿದ್ದ ಆರೋಪಿ ಶಾಂತರಾಜ್ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಮನೆ ಹಿಂಭಾಗದ ತೋಟದಲ್ಲಿ ಚೆಂಡು ಹೂವಿನ ಗಿಡಗಳ ಮಧ್ಯೆ 9 ಗಾಂಜಾ ಗಿಡಗಳನ್ನು ಬೆಳೆಸಿದ್ದನ್ನು ತೋರಿಸಿದ್ದಾನೆ. 3 ತಿಂಗಳಲ್ಲಿ 3 ಅಡಿ ಬೆಳೆದಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಅಪರಾಧ ಪತ್ತೆದಳದ ಲೋಕೇಶ್, ಮುರಳಿ, ಸಿಬ್ಬಂದಿ ಶಫೀರ್, ಬೋಪಣ್ಣ, ಶಶಿಕುಮಾರ್, ರವಿಚಂದ್ರ, ವಿನಯ್, ಧನಂಜಯ್, ಡಿಂಪಲ್, ವಿವೇಕ್, ಪೂರ್ಣಿಮಾ ಪಾಲ್ಗೊಂಡಿದ್ದರು.