ಕುಶಾಲನಗರ ತಾಲ್ಲೂಕು ರಚನೆ ಎಚ್.ಡಿ. ಕುಮಾರಸ್ವಾಮಿ ಕೊಡುಗೆ: ಕೆ.ಎಂ.ಬಿ.ಗಣೇಶ್

ಕುಶಾಲನಗರ: ‘ಕುಶಾಲನಗರ ತಾಲ್ಲೂಕು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಕೊಡುಗೆ’ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ಬಿ.ಗಣೇಶ್ ಹೇಳಿದರು.
‘ತಾಲ್ಲೂಕು ರಚನೆ ನಮ್ಮ ಸಾಧನೆ ಎಂದು ಕಾಂಗ್ರೆಸ್ ಮತ್ತು ಬಿಜೆಪಿಯವರು ಬಿಂಬಿಸಿಕೊಳ್ಳುತ್ತಿರುವುದು ಶೋಭೆ ತರುವ ವಿಚಾರವಲ್ಲ’ ಎಂದು ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಕೊಡಗಿಗೆ ಚುನಾವಣಾ ಪ್ರಚಾರಕ್ಕೆ ಬಂದ ವೇಳೆ ಕುಮಾರಸ್ವಾಮಿ ಅವರು ಭರವಸೆ ನೀಡಿದಂತೆ ಮುಖ್ಯಮಂತ್ರಿಯಾದಾಗ ಕುಶಾಲನಗರ ಮತ್ತು ಪೊನ್ನಂಪೇಟೆಯನ್ನು ನೂತನ ತಾಲ್ಲೂಕಾಗಿ ಘೋಷಣೆ ಮಾಡಿದರು. ನಂತರ ಬಂದ ಸರ್ಕಾರ
ಮುಂದುವರೆದ ಕ್ರಮಗಳನ್ನ ಕೈಗೊಂಡಿದೆ ಅಷ್ಟೆ. ಕಾವೇರಿ ತಾಲ್ಲೂಕು ರಚನೆಗೆ ಪಕ್ಷಾತೀತವಾಗಿ ಹೋರಾಟ ನಡೆದಿದೆಯೇ ಹೊರತು ಯಾವುದೇ ಒಂದು ಪಕ್ಷದ ಸಾಧನೆಯಲ್ಲ’ ಎಂದರು.
‘ಜಿಲ್ಲೆಗೆ ಬಿಜೆಪಿಯ ಕೊಡುಗೆ ಏನೂ ಇಲ್ಲ. ಭೂಕುಸಿತ ಸಂದರ್ಭ ಮನೆ ಕಳೆದುಕೊಂಡವರಿಗೆ ಸೂರು ಒದಗಿಸಿದ ಭಾಗ್ಯ ಕುಮಾರಸ್ವಾಮಿ ಅವರಿಗೆ ಸಲ್ಲಬೇಕು. ಮೂರು ವರ್ಷಗಳಿಂದ ಪ್ರವಾಹ ಪರಿಸ್ಥಿತಿ ಉಂಟಾಗುತ್ತಿದ್ದರೂ ಇದುವರೆಗೆ ಹೂಳೆತ್ತುವ ಕಾರ್ಯ ಸಮರ್ಪಕವಾಗಿ ಆಗಿಲ್ಲ’ ಎಂದು ಅವರು ಆರೋಪಿಸಿದರು.
‘ತಾಲ್ಲೂಕು ಉದ್ಘಾಟನೆ ಸಂದರ್ಭ ಸೌಜನ್ಯಕ್ಕಾದರೂ ಹೋರಾಟಗಾರರನ್ನು ಸ್ಮರಿಸಿಕೊಳ್ಳದೆ ಸರ್ಕಾರಿ ಕಾರ್ಯಕ್ರ ಮವನ್ನು ಶಾಸಕರು ಬಿಜೆಪಿ ಕಾರ್ಯಕ್ರಮವಾಗಿಸಿದ್ದು ಸರಿಯಲ್ಲ’ ಎಂದು ಗಣೇಶ್ ಟೀಕಿಸಿದರು.
ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ಸಿ.ಎಲ್.ವಿಶ್ವ, ‘19 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೋರಾಟ ಸಮಿತಿಗಳು ಒಗ್ಗೂಡಿ ಮುಂಬರುವ ದಿನಗಳಲ್ಲಿ ತಾಲ್ಲೂಕು ರಚನೆ ಸಂಭ್ರಮ ಆಚರಿಸಿ ಹೋರಾಟಗಾರರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು’ ಎಂದರು.
ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಸಾಖ್ ಖಾನ್, ಖಜಾಂಚಿ ಡೆನ್ನಿ ಬರೋಸ್, ಎಪಿಎಂಸಿ ನಿರ್ದೇಶಕ ರಾಮಚಂದ್ರ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.