ಕುಶಾಲನಗರ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಗುರುವಾರ ಮಧ್ಯಾಹ್ನ ಸಾಧಾರಣ ಮಳೆ ಸುರಿಯಿತು.
ಕೂಡುಮಂಗಳೂರು ಗ್ರಾಮದಲ್ಲಿ ಸುರಿದ ಜೋರು ಮಳೆಗೆ ಬಸವನತ್ತೂರು ಗ್ರಾಮದ ಗಾಯತ್ರಿ ಶೇಖರ್ ಅವರ ಮನೆ ಮುಂದಿನ ಬರೆ ಕುಸಿದಿದೆ. ಒಂದು ತಾಸಿಗೂ ಹೆಚ್ಚು ಕಾಲ ಸುರಿದ ಮಳೆಯಿಂದ ಚರಂಡಿಯಲ್ಲಿ ನೀರು ತುಂಬಿ ರಸ್ತೆ ಮೇಲೆ ಹರಿದಿದೆ.
ಕೂಡುಮಂಗಳೂರು ಹಾರಂಗಿಗೆ ಹೋಗುವ ರಸ್ತೆಯಲ್ಲಿ ಚರಂಡಿ ತುಂಬಿ ಉಕ್ಕಿ ಹರಿದ ನೀರು ಎದುರುಗಡೆ ಇರುವ ರಮೇಶ್ ಎಂಬುವವರ ಮನೆಗೆ ನುಗ್ಗಿದೆ. ಇದರಿಂದ ಮನೆಯ ವಸ್ತುಗಳಿಗೆ ಹಾನಿಯಾಗಿದೆ. ಮನೆಯಿಂದ ನೀರು ಹೊರ ಹಾಕಲು ಮನೆಯ ಸದಸ್ಯರು ಹರಸಾಹಸಪಟ್ಟರು.
ಕೂಡಿಗೆ, ಹೆಬ್ಬಾಲೆ, ಶಿರಂಗಾಲ ಹಾಗೂ ಸಿದ್ದಲಿಂಗಪುರ ವ್ಯಾಪ್ತಿಯಲ್ಲೂ ಮಳೆಯಾಗಿದೆ. ದಿಢೀರ್ ಬಂದ ಮಳೆಯಿಂದ ಜನಜೀವನ ಅಸ್ತವ್ಯಸ್ತ ವಾಗಿದೆ. ಹೋಬಳಿ ವ್ಯಾಪ್ತಿಯಲ್ಲಿ ತರಕಾರಿ ಬೆಳೆಗೂ ಹಾನಿ ಉಂಟಾಗಿದೆ.