ನಾಪೋಕ್ಲು: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಹೆತ್ತ ತಂದೆ– ತಾಯಿಯನ್ನು ದೊಣ್ಣೆಯಿಂದ ಥಳಿಸಿ ಹತ್ಯೆ ಮಾಡಿದ ಧಾರುಣ ಘಟನೆ ಇಲ್ಲಿಗೆ ಸಮೀಪದ ಕೋಕೇರಿ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.
ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಕೇರಿ ಗ್ರಾಮದ ಕಾಫಿ ಬೆಳೆಗಾರ ಚೇನಂಡ ಶಿವಾಜಿ ಸೋಮಯ್ಯನವರ ಲೈನ್ ಮನೆಯ ನಿವಾಸಿ ಅಯ್ಯಪ್ಪ (26) ಎಂಬಾತ ಕುಡಿದ ಅಮಲಿನಲ್ಲಿ ತನ್ನ ತಂದೆ– ತಾಯಿಯನ್ನು ದೊಣ್ಣೆಯಿಂದ ಥಳಿಸಿದ್ದಾನೆ. ವಾಸವಾಗಿದ್ದ ಎರವರ ರಾಜು (65) ಮತ್ತು ಗೌರಿ (60) ಸ್ಥಳದಲ್ಲೇ ಮೃಥಪಟ್ಟಿದ್ದಾರೆ.
ತೋಟದ ಮಾಲೀಕ ಮಂಗಳವಾರ ಬೆಳಿಗ್ಗೆ ಕೆಲಸಕ್ಕೆ ಕಾರ್ಮಿಕರನ್ನು ಕರೆಯಲು ಹೋದಾಗ ಈ ಘಟನೆ ಬೆಳಕಿಗೆ ಬಂದಿದೆ. ಅವರು ನಾಪೋಕ್ಲು ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ನಾಪೋಕ್ಲು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಸ್ಥಳಕ್ಕೆ ಮಡಿಕೇರಿ ಡಿವೈಎಸ್ಪಿ ದಿನೇಶ್ ಕುಮಾರ್, ಗ್ರಾಮಾಂತರ ಠಾಣಾ ಸಿಪಿಐ ದಿವಾಕರ್, ಪಿಎಸ್ಐ ಆರ್.ಕಿರಣ್, ಸಿಬ್ಬಂದಿ ಭೇಟಿ ಮುಂದಿನ ಕ್ರಮ ಕೈಗೊಂಡಿದ್ದಾರೆ.