ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ, ಚುನಾವಣಾ ಕಾರಣಕ್ಕೆ ಕಡಬಕ್ಕೆ ವರ್ಗಾವಣೆಗೊಂಡಿರುವ ಬಿ.ವಿ.ಜಯಣ್ಣ ಅವರ ಕುಶಾಲನಗರದ ಮನೆ ಹಾಗೂ ಕಡಬದ ಕಚೇರಿಯಲ್ಲಿ ₹ 1.30 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. ₹ ಅದರಲ್ಲಿ, 9.20 ಲಕ್ಷ ನಗದು, ₹ 1.09 ಕೋಟಿ ಮೌಲ್ಯದ 3 ಮನೆಗಳು, 5 ಎಕರೆ ಭೂಮಿ, 1 ನಿವೇಶನ, ₹ 8.63 ಲಕ್ಷ ಮೌಲ್ಯದ ಚಿನ್ನಾಭರಣ, ₹ 25.70 ಲಕ್ಷ ಮೌಲ್ಯದ 3 ಕಾರುಗಳು ಸೇರಿವೆ.
ಜಿಲ್ಲಾ ಪಂಚಾಯಿತಿಯ ಸಹಾಯಕ ಎಂಜನಿಯರ್ ಎಂ.ಎಂ.ಫಯಾಜ್ ಅಹಮ್ಮದ್ ಅವರ ಕುಶಾಲನಗರದ ಮನೆ, ಪಿರಿಯಾಪಟ್ಟಣ ತಾಲ್ಲೂಕಿನ ರಾಣಿಗೇಟ್ನ ತೋಟದ ಮನೆ, ಮಡಿಕೇರಿಯ ಸಂಬಂಧಿಕರ ಮನೆ ಸೇರಿದಂತೆ ಒಟ್ಟು 5 ಸ್ಥಳಗಳಲ್ಲಿ ₹ 1.69 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.
ಅದರಲ್ಲಿ ₹ 75 ಲಕ್ಷ ಮೌಲ್ಯದ 2 ಮನೆ, ₹ 40 ಲಕ್ಷ ಮೌಲ್ಯದ 4 ಎಕರೆ ಕೃಷಿ ಭೂಮಿ, ₹ 48,070 ನಗದು, ₹ 95,800, ಮೌಲ್ಯದ ಚಿನ್ನಾಭರಣ, ₹ 24.75 ಲಕ್ಷ ಮೌಲ್ಯದ ವಾಹನಗಳು ಸೇರಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಲೋಕಾಯುಕ್ತ ಡಿವೈಎಸ್ಪಿ ಪವನ್ಕುಮಾರ್, ಮ್ಯಾಥ್ಯೂ ಥಾಮಸ್, ಲೋಹಿತ್, ಎಂ.ಆರ್ ಗೌತಮ್, ಇನ್ಸ್ಪೆಕ್ಟರ್ಗಳಾದ ಲೋಕೇಶ್, ಅನಂತರಾಮ್, ಸಿಬ್ಬಂದಿಯಾದ ಮಂಜು, ಲೋಹಿತ್, ಸಲಾಹುದ್ದೀನ್, ಮಾಲಿಂಗಸ್ವಾಮಿ ನೇತೃತ್ವದಲ್ಲಿ ಈ ದಾಳಿ ನಡೆದಿದೆ.