ಕಲಬುರ್ಗಿ: ದೇಶದ ಪ್ರಮುಖ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣಗೊಳಿಸುವ ಪ್ರಯತ್ನಗಳನ್ನು ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿ ಸಿಪಿಐ (ಎಂ) ಪಕ್ಷ ಹಾಗೂ ಜನವಾದಿ ಮಹಿಳಾ ಸಂಘಟನೆ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಸಂಚಾಲಕಿ ಕೆ. ನೀಲಾ, 'ದೇಶವನ್ನು ಬಡತನಕ್ಕೆ ತಳ್ಳಿ ದೇಶದ ಸಂಪತ್ತನ್ನು ಕಾರ್ಪೊರೇಟಿಗರ ಪಾಲು ಮಾಡಲೆಂದೇ ಪ್ರಧಾನಿ ನರೇಂದ್ರ ಮೋದಿ ಪಣ ತೊಟ್ಟಂತಿದೆ. ಆದ್ದರಿಂದಲೇ ಎಲ್ಐಸಿ, ರೈಲ್ವೆ, ಏರ್ ಇಂಡಿಯಾ ಹೀಗೆ ಎಲ್ಲವನ್ನೂ ಖಾಸಗೀಕರಣ ಮಾಡಲಾಗಿದೆ. ಜನತೆಯ ಚಳುವಳಿಗಳನ್ನು ಹತ್ತಿಕ್ಕಲು ಕೋವಿಡ್ ಬಳಸಿಕೊಳ್ಳಲಾಗುತಿದೆ. ಜನರನ್ನು ಭಯಗ್ರಸ್ಥಗೊಳಿಸಿ ಕರಾಳ ಕಾಯ್ದೆಗಳನ್ನು ತರಲಾಗಿದೆ, ಕಾರ್ಮಿಕ ರೈತ ವಿರೋಧಿ ಕಾಯ್ದೆಗಳು ಬಂದಿವೆ. ನಿರುದ್ಯೋಗ ಮುಗಿಲು ಮುಟ್ಟಿದೆ. ಆದರೆ ಇವರಿಗೆ ದೇಶ ಒಡೆದು ಮಂದಿರ ಕಟ್ಟುವ ಚಿಂತೆ ಇದೆ. ಕ್ವಿಟ್ ಇಂಡಿಯಾ ಚಳುವಳಿಯ ಬೆಳಕನ್ನು ಬೆನ್ನಿಗಿಟ್ಟುಕೊಂಡು ಎಡಪಕ್ಷಗಳು ದೇಶ ಉಳಿಸಿ ಎಂಬ ದೇಶಪ್ರೇಮಿ ಆಂದೋಲನಕ್ಕೆ ಕರೆ ಕೊಟ್ಟಿವೆ. ಕಾರ್ಪೊರೇಟ್ ಪರವಾದ ಸರ್ಕಾರ ತೊಲಗಿಸಿ ದೇಶ ಉಳಿಸಿಯೇ ವಿಶ್ರಾಂತಿ. ಅಲ್ಲಿವರೆಗೂ ನಿಲ್ಲದು ಹೋರಾಟ' ಎಂದು ಹೇಳಿದರು.
ಕಾರ್ಮಿಕ ಮುಖಂಡ ಎಂ.ಬಿ.ಸಜ್ಜನ, ಸಿಪಿಐ (ಎಂ) ಪಕ್ಷದ ಶಾಖಾ ಕಾರ್ಯದರ್ಶಿ ಮೊಹ್ಮದ್ ಮುಖದುಮ್, ಸಮಿತಿ ಕಾರ್ಯದರ್ಶಿ ಶರಣಬಸವ ಮಮಶೆಟ್ಟಿ ಮಾತನಾಡಿದರು.