ವಿರಾಜಪೇಟೆ: ‘ನಮ್ಮನ್ನು ನಾವು ಪರಿವರ್ತನೆ ಮಾಡಿಕೊಂಡು ನಮ್ಮೊಳಗೆ ಬೆಳಕು ತರುವಂತದ್ದೇ ಧರ್ಮ’ ಎಂದು ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯಪಟ್ಟರು.
ಪಟ್ಟಣದ ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿನ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ವತಿಯಿಂದ 88ನೇ ತ್ರಿಮೂರ್ತಿ ಶಿವಜಯಂತಿ ಮಹೋತ್ಸವದ ಪ್ರಯುಕ್ತ ತಾಲ್ಲೂಕು ಮೈದಾನದಲ್ಲಿ ಭಾನುವಾರ ನಡೆದ ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯದರ್ಶನ ಮತ್ತು ಆಧ್ಯಾತ್ಮಿಕ ಚಿತ್ರಗಳ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಅಂತರಂಗದಲ್ಲಿರುವ ಅಜ್ಞಾನ ತೊಲಗಿಸಿ ಜ್ಞಾನದ ಚಕ್ಷು ಬೀರಬೇಕು. ಜ್ಞಾನದ ಚಕ್ಷು ಇಲ್ಲದೆ ಸಿರಿಸಂಪತ್ತು, ಸಾಮ್ರಾಜ್ಯ, ತಂದಿಟ್ಟರೂ ಅದನ್ನು ಅನುಭವಿಸಲು ಹೊರಟರೆ ಶೂನ್ಯವೇ ಲಭಿಸುತ್ತದೆ. ಇಂದು ಎಲ್ಲ ಕಡೆ ಹಿಂಸೆ, ಕ್ರೋಧ, ಆಕ್ರೋಶ, ಅಸೂಯೆಗಳಲ್ಲಿ ತೊಡಗಿಸಿಕೊಂಡು ಜೀವನ ಏನೂ ಎಂಬುವುದನ್ನು ಹಲವರು ಮರೆತಿದ್ದಾರೆ. ತಾನು ಬದುಕುವುದರ ಜೊತೆ ಜೊತೆಗೆ ಪ್ರತಿಯೊಬ್ಬರನ್ನು ಪ್ರೀತಿಸುವಂತಾಗಬೇಕು. ದ್ವೇಷ ತೊಡೆದು ಹಾಕಬೇಕು. ಜಗತ್ತಿನಲ್ಲಿರುವವರೆಲ್ಲ ನನ್ನವರು ಭಾವಿಸುವಾತನೇ ಜಗದ್ಗುರು ಆಗುತ್ತಾನೆ’ ಎಂದರು.
‘ಬಾಹ್ಯ ಅನ್ವೇಷಣೆಯಿಂದ ಪರಿವರ್ತನೆ ಸಾಧ್ಯವಿಲ್ಲ. ನಮ್ಮೊಳಗೆ ಇರುವ ಅರಿಷಡ್ವರ್ಗಗಳನ್ನು ನಾಶ ಮಾಡಿ ಎತ್ತರಕ್ಕೆ ಏರಿದರೆ ವ್ಯಕ್ತಿ ಪರಿಪೂರ್ಣನಾಗುತ್ತಾನೆ’ ಎಂದರು.
ಮೈಸೂರಿನ ಪ್ರಾಣೇಶ್ ಮಾತನಾಡಿ, ‘ನಮ್ಮೊಳಗಿನ ಪರಿವರ್ತನೆ ಪ್ರಸ್ತುತ ಸಮಾಜದಲ್ಲಿ ಬಹಳ ಅವಶ್ಯಕವಾಗಿದೆ. ಭಗವಂತನ ಧ್ಯಾನದಿಂದ ಜ್ಞಾನ ಲಭಿಸುತ್ತದೆ. ನಮ್ಮೊಳಗಿನ ಅಂತಛಕ್ಷು ಜಾಗೃತವಾಗುತ್ತದೆ’ ಎಂದರು.
ಮಾಜಿ ಯೋಧ ಪ್ರಿನ್ಸ್ ಗಣಪತಿ, ಮಡಿಕೇರಿ ಶಾಖೆಯ ಧನಲಕ್ಷ್ಮಿ, ಜ್ಞಾನಗಂಗಾ ಭವನದ ಮುಖ್ಯಸ್ಥರಾದ ಕೋಮಲ ಹಾಗೂ ಮೈಸೂರು ಬ್ರಹ್ಮಾಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಮುಖ್ಯ ಸಂಚಾಲಕಿ ಬಿ.ಕೆ.ಲಕ್ಷ್ಮೀಜಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಭರತನಾಟ್ಯ ಪ್ರದರ್ಶನ ನಡೆಯಿತು.
ತಾಲ್ಲೂಕು ಮೈದಾನದಲ್ಲಿ ಮಾರ್ಚ್ 1ರವರೆಗೆ ಪುಸ್ತಕ ಪ್ರದರ್ಶನ ಮತ್ತು ಮಾರಾಟ, ಜ್ಯೋತಿರ್ಲಿಂಗಗಳ ದರ್ಶನ ಕಾರ್ಯಕ್ರಮ ನಡೆಯಲಿದೆ.
ಈ ಸಂದರ್ಭ ವಿದ್ಯಾರಣ್ಯಪುರಂ ಶಾಖೆಯ ಸಂಚಾಲಕಿ ಯತ್ನ, ವಿವಿಧ ಸೇವಾ ಕೇಂದ್ರದ ಸದಸ್ಯರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.