ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಗುರುವಾರ ರಾತ್ರಿ ಇಡೀ ಹಾಗೂ ಶುಕ್ರವಾರ ಬೆಳಿಗ್ಗೆ ಮಳೆ, ಗಾಳಿ ಮುಂದುವರಿದಿದೆ.
ಭಾಗಮಂಡಲದಲ್ಲಿ ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನಾಪೋಕ್ಲು- ಭಾಗಮಂಡಲ ರಸ್ತೆ ಹೊಳೆಯಂತಾಗಿದ್ದು, ಸಂಪರ್ಕ ಕಡಿತಗೊಂಡಿದೆ. ಭಾಗಮಂಡಲ- ಮಡಿಕೇರಿ ರಸ್ತೆಯಲ್ಲೂ ಒಂದು ಅಡಿಯಷ್ಟು ನೀರು ಹರಿಯುತ್ತಿದೆ.
ಸೋಮವಾರಪೇಟೆ ತಾಲ್ಲೂಕಿನ ದೊಡ್ಡಬ್ಬೂರು ಗ್ರಾಮದ ರೇಖಾ ಅವರ ಮನೆ, ಕುಮಾರಹಳ್ಳಿ ಗ್ರಾಮದ ಎಂ.ಟಿ.ಮೇದಪ್ಪ ಅವರ ಮನೆಗಳಿಗೆ ಹಾನಿಯಾಗಿದೆ.
ಹಾರಂಗಿ ಜಲಾಶಯಕ್ಕೆ 13,603 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, 15,500 ಕ್ಯುಸೆಕ್ ನೀರನ್ನು ನದಿಗೆ ಹೊರಬಿಡಲಾಗುತ್ತಿದೆ.
ಮಡಿಕೇರಿ ತಾಲೂಕಿನ ಬಲ್ಲಮಾವಟಿಯಲ್ಲಿ 15 ಸೆಂ.ಮೀ, ಭಾಗಮಂಡಲದಲ್ಲಿ 14 ಸೆಂ.ಮೀ ಮಳೆ ಸುರಿದಿದೆ.