ಮಡಿಕೇರಿ: ‘ಹೆಲ್ಮೆಟ್ ಧರಿಸಿ ಜೀವ ಉಳಿಸಿ’, ‘ಸೀಟ್ ಬೆಲ್ಟ್ ಧರಿಸಿ ವಾಹನ ಚಲಿಸಿ’, ‘ಮದ್ಯಸೇವಿಸಿ ವಾಹನ ಚಲಾಯಿಸಬೇಡಿ’... ಹೀಗೆ ವಿವಿಧ ಸಂಚಾರ ನಿಯಮಗಳ ಕುರಿತು ವಿದ್ಯಾರ್ಥಿಗಳು ಘೋಷಣೆಗಳನ್ನು ಕೂಗಿದರು.
ಕೊಡಗು ಜಿಲ್ಲಾ ಪೊಲೀಸ್ ಇಲಾಖೆ, ಮಡಿಕೇರಿ ಸಂಚಾರ ಪೊಲೀಸ್ ಠಾಣೆ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ನ ಕೊಡಗು ಜಿಲ್ಲಾ ಸಂಸ್ಥೆ ಮತ್ತು ಎಎಲ್ಜಿ ಕ್ರೆಸೆಂಟ್ ಶಾಲೆ ವತಿಯಿಂದ ಇಲ್ಲಿ ಬುಧವಾರ ನಡೆದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದಲ್ಲಿ ಈ ದೃಶ್ಯಗಳು ಕಂಡು ಬಂದವು.
ಶಾಲೆಯ ಹಲವು ವಿದ್ಯಾರ್ಥಿಗಳು ಶಾಲೆಯಿಂದ ಹೊರಟು, ಹಳೆಯ ಖಾಸಗಿ ಬಸ್ನಿಲ್ದಾಣ ನಂತರ ಮತ್ತೆ ಶಾಲೆಯತ್ತ ಜಾಥಾ ನಡೆಸಿದರು. ಈ ವೇಳೆ ಸಂಚಾರ ನಿಯಮಗಳ ಕುರಿತು ಘೋಷಣೆಗಳನ್ನು ಕೂಗಿದರು. ಭಿತ್ತಿಬರಹಗಳನ್ನು ಪ್ರದರ್ಶಿಸಿ ಗಮನ ಸೆಳೆದರು. ಸಂಚಾರ ನಿಯಮಗಳ ಕುರಿತು ಕರಪತ್ರಗಳನ್ನು ಹಂಚಿದರು.
ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ನ ಕೊಡಗು ಜಿಲ್ಲಾ ಘಟಕದ ಆಯುಕ್ತ ಬೇಬಿ ಮ್ಯಾಥ್ಯು, ಬೊಳ್ಳಜಿರ ಅಯ್ಯಪ್ಪ, ದಮಯಂತಿ, ಡೈಸಿ, ಸಬ್ಇನ್ಸ್ಪೆಕ್ಟರ್ ಶ್ರೀಧರ, ಎಎಸ್ಐ ರಂಗೇಗೌಡ, ಸಂಚಾರ ಪೊಲೀಸ್ ಠಾಣೆಯ ನಂದ, ಮಂಜುನಾಥ, ಶಿಕ್ಷಣಾಧಿಕಾರಿ ಹರೀಶ್ ಇದ್ದರು.
ನಂತರ, ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಂಚಾರ ನಿಯಮಗಳ ಕುರಿತು ಅರಿವು ಮೂಡಿಸಿದರು.