ಮಡಿಕೇರಿ: ‘ದೇಶದಲ್ಲಿ ಎನ್ಡಿಎ ಹಾಗೂ ಐಎನ್ಡಿಎ ಮೈತ್ರಿಕೂಟಗಳೆರಡೂ ಬಂಡವಾಳಶಾಹಿಗಳ ಪರವಾಗಿವೆಯೇ ಹೊರತು ದುಡಿಯುವ ಜನಗಳ ಪರವಾಗಿಲ್ಲ’ ಎಂದು ಎಸ್ಯುಸಿಐ ಕಮ್ಯುನಿಸ್ಟ್ ಪಕ್ಷದ ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಟಿ.ಆರ್.ಸುನಿಲ್ ಹೇಳಿದರು.
ಇಲ್ಲಿನ ಹಳೆಯ ಖಾಸಗಿ ಬಸ್ನಿಲ್ದಾಣದಲ್ಲಿ ಭಾನುವಾರು ಅವರು ಮತಯಾಚಿಸಿ ಮಾತನಾಡಿದರು. ಜನರ ಜ್ವಲಂತ ಸಮಸ್ಯೆಗಳಾದ ಬೆಲೆಏರಿಕೆ, ನಿರುದ್ಯೋಗ, ಶಿಕ್ಷಣದ ವ್ಯಾಪಾರೀಕರಣದ ವಿರುದ್ಧ ಅವಿರತವಾಗಿ ಹೋರಾಟಗಳನ್ನು ಬೆಳೆಸುತ್ತಿರುವ ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷಕ್ಕೆ ಮತ ನೀಡಿ ಎಂದು ಮನವಿ ಮಾಡಿದರು.
ಪ್ರಚಾರ ಜಾಥಾದಲ್ಲಿ ಪಕ್ಷದ ಮೈಸೂರು ಜಿಲ್ಲಾ ಸೆಕ್ರಟೇರಿಯೇಟ್ ಸದಸ್ಯರಾದ ಎಂ.ಉಮಾದೇವಿ, ಜಿಲ್ಲಾ ಸಮಿತಿ ಸದಸ್ಯರಾದ ಸೀಮಾ, ಸಂಧ್ಯಾ, ಹರೀಶ್, ಸದಸ್ಯರಾದ ಸುಭಾಷ್, ಚಂದ್ರಕಲಾ, ನೀತು, ಆಕಾಶ್ ಹಾಗೂ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಭಾಗವಹಿಸಿದ್ದರು.