ಗಂಗಾವತಿ: ತಾಲ್ಲೂಕಿನ ಬೈಪಾಸ್ ರಸ್ತೆ ಸಮೀಪದ ದುರ್ಗಾದೇವಿ ದೇವಸ್ಥಾನ ಸಮಿತಿ ವತಿಯಿಂದ ನಿರ್ಮಿಸಲಾದ 18 ಸಮಾಜದ ವ್ಯಾಪಾರ ಮಳಿಗೆಗಳ ಉದ್ಘಾಟನೆಯನ್ನು ಸಸಿ ನೆಡುವ ಮೂಲಕ ಮಾಜಿ ಸಂಸದ ಎಚ್.ಜಿ. ರಾಮುಲು ಶುಕ್ರವಾರ ನೆರವೇರಿಸಿದರು.
ನಂತರ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ವ್ಯಾಪಾರ ಮಳಿಗೆಗಳ ಉದ್ಘಾಟನಾ ಕಾರ್ಯಕ್ರಮ ಸಸಿ ನೆಡುವ ಮೂಲಕ ಚಾಲನೆ ನೀಡಿರುವುದು ಶ್ಲಾಘನೀಯ. ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಮುಂದಿನ ದಿನಗಳಲ್ಲಿ ನಗರ ಅಭಿವೃದ್ದಿಗೆ ರಸ್ತೆ ವಿಸ್ತರಣೆ ಆಗಲಿದೆ. ಎಲ್ಲರೂ ಸಸಿಗಳನ್ನು ನೆಟ್ಟು, ನಗರದ ಸೌಂದರ್ಯ ಹೆಚ್ಚಿಸಬೇಕು ಎಂದರು.
ಅರಣ್ಯ ಇಲಾಖೆ ವತಿಯಿಂದ ಉಚಿತವಾಗಿ ಸಸಿಗಳನ್ನು ನೀಡುತ್ತಿದ್ದು, ಸಾರ್ವಜನಿಕರು ತಮ್ಮ ಮನೆ, ಜಮೀನುಗಳಲ್ಲಿ ಸಸಿ ನೆಟ್ಟು ಪೋಷಿಸಿಬೇಕು ಎಂದರು.
ವಿಧಾನ ಪರಿಷತ್ತಿನ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ಮಾತನಾಡಿ, ಮಳಿಗೆಗಳ ಲೋಕಾರ್ಪಣೆಗೆ ಶಾಸಕರು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. 18 ಸಮಾಜಗಳ ಮೇಲೆ ದೇವಿಯ ಆರ್ಶೀವಾದ ಇದೆ. ಇಲ್ಲಿನ ಎಲ್ಲ ಸಮಾಜಗಳ ರುದ್ರಭೂಮಿ ಅಭಿವೃದ್ಧಿಗೆ ಜಿಲ್ಲಾಡಳಿತ ಮುಂದಾಗಬೇಕು ಎಂದರು.
ಸರ್ಕಾರದ ಆಸ್ತಿ ಎಂದು ನೋಟಿಸ್ ನೀಡುವುದು, ಸಮಾಜದ ಮುಖಂಡರ ಮೇಲೆ ಪ್ರಕರಣ ದಾಖಲಿಸುವ ಸನ್ನಿವೇಶಗಳು ಕಂಡು ಬಂದಲ್ಲಿ ಹೋರಾಟ ನಡೆಸಲಾಗುತ್ತದೆ ಎಂದರು.
ಹನುಮಂತಪ್ಪ ನಾಯಕ, ಜೋಗದ ನಾರಾಯಣಪ್ಪ, ವೆಂಕಟೇಶ್ ಅಮರ ಜ್ಯೋತಿ, ಅನ್ನಪೂರ್ಣ ಸಿಂಗ್, ಬಿ. ಆಶೋಕ್, ಜಿ.ಹರಿಬಾಬು ಇದ್ದರು.