ಸೋಮವಾರಪೇಟೆ (ಕೊಡಗು ಜಿಲ್ಲೆ): ತಾಲ್ಲೂಕಿನ ಉಂಜಿನಳ್ಳಿ ಗ್ರಾಮದಲ್ಲಿ ಬುಧವಾರ ಇಬ್ಬರು ಮಕ್ಕಳು ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ.
ಗ್ರಾಮದ ಕೃಷಿಕ ಎಚ್.ಆರ್. ಗಿರೀಶ್ ಎಂಬುವವರ ಮಕ್ಕಳಾದ ಮನಿಕ್ಷಾ (15) ಹಾಗೂ ಪೂರ್ಣೇಶ್ (12) ಮೃತಪಟ್ಟವರು.
ಪಕ್ಕದಲ್ಲಿರುವ ತಮ್ಮ ಅಜ್ಜಿ ಅಜ್ಜನ ಮನೆಯಲ್ಲಿ ಮೃತದೇಹಗಳು ಪತ್ತೆಯಾಗಿವೆ. ತೋಟದಿಂದ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಮನೆಯೊಳಗೆ ಜೋಕಾಲಿ ಕಟ್ಟಿಕೊಂಡು ಆಟವಾಡುತ್ತಿದ್ದರು. ಜೋಕಾಲಿ ಕುತ್ತಿಗೆಗೆ ಸುತ್ತಿಕೊಂಡು ಮೃತಪಟ್ಟಿದ್ದಾರೆ ಎಂದು ಗಿರೀಶ್ ಅವರು ಸೋಮವಾರಪೇಟೆ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮರಣೋತ್ತರ ಪರೀಕ್ಷೆಯ ಬಳಿ ಸಾವು ಅಕಸ್ಮಿಕವೋ, ಆತ್ಮಹತ್ಯೆಯೊ ಎಂದು ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.