ಮಡಿಕೇರಿ: ಕಿತ್ತೂರು ಸ್ವಾತಂತ್ರ್ಯ ಸಂಗ್ರಾಮ ಕುರಿತು ನಡೆಯಲಿರುವ ‘ಕಿತ್ತೂರು ಉತ್ಸವ’ದ ಪ್ರಯುಕ್ತ ನಗರಕ್ಕೆ ಬಂದ ‘ಕಿತ್ತೂರು ರಾಣಿ ಚೆನ್ನಮ್ಮ ವಿಜಯ ಜ್ಯೋತಿ ಯಾತ್ರಾ’ ವಾಹನವನ್ನು ಉಪವಿಭಾಗಾಧಿಕಾರಿ ಯತೀಶ್ ಉಲ್ಲಾಳ್ ಬುಧವಾರ ಸ್ವಾಗತಿಸಿದರು.
ಇಲ್ಲಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಬರಮಾಡಿಕೊಂಡ ಅವರು ಶುಭ ಕೋರಿದರು. ಈ ವೇಳೆ ತಹಶೀಲ್ದಾರ್ ಮಹೇಶ್, ಪೌರಾಯುಕ್ತ ವಿಜಯ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ,ಯಾತ್ರಾ ನೋಡಲ್ ಅಧಿಕಾರಿ ವೆಂಕಟೇಶ ನಾಗನೂರ ಇದ್ದರು.
ಏನಿದು ವಿಜಯ ಜ್ಯೋತಿ ಯಾತ್ರೆ?
ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಕಿತ್ತೂರು ರಾಣಿ ಚೆನ್ನಮ್ಮ ಅವರ ಸ್ಮರಣಾರ್ಥ ಇದೇ ಅ. 23ರಿಂದ 3 ದಿನ ಬೆಳಗಾವಿ ಜಿಲ್ಲೆಯಲ್ಲಿ ಕಿತ್ತೂರು ಉತ್ಸವ ಜರುಗಲಿದೆ. ಆ ನಿಟ್ಟಿನಲ್ಲಿ ಕಿತ್ತೂರು ಚೆನ್ನಮ್ಮ ಅವರ ‘ವಿಜಯ ಜ್ಯೋತಿ ಯಾತ್ರಾ’ ವಾಹನವು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಂಚರಿಸಿ, ಸ್ವಾತಂತ್ರ್ಯ ಹೋರಾಟಕ್ಕೆ ಕಿತ್ತೂರು ಚೆನ್ನಮ್ಮ ಅವರ ಕೊಡಗೆ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.