ವಿರಾಜಪೇಟೆ: ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ 24 ಗಂಟೆಗಳಿಂದ ಧಾರಾಕಾರ ಮಳೆ ಆಯಿತು.
ಕೆಲವು ದಿನಗಳಿಂದ ಕೊಂಚ ಇಳಿಮುಖಗೊಂಡಿದ್ದ ವರ್ಷಧಾರೆಯು ಶುಕ್ರವಾರ ರಾತ್ರಿಯಿಂದ ಮತ್ತೆ ಧಾರಾಕಾರವಾಗಿ ಸುರಿಯುತ್ತಿದೆ.
ವಿರಾಜಪೇಟೆ ವಿಭಾಗದಲ್ಲಿ ಶನಿವಾರ ದಿನವಿಡೀ ಬಿಡುವು ನೀಡದೆ ಮಳೆ ಸುರಿಯಿತು. ಸಮೀಪದ ಬೇಟೋಳಿ, ಆರ್ಜಿ, ರಾಮನಗರ, ಹೆಗ್ಗಳ, ಮಾಕುಟ್ಟ, ಬಿಟ್ಟಂಗಾಲ, ಕದನೂರು, ಕಾಕೋಟು ಪರಂಬು, ಚೆಂಬೆಬೆಳ್ಳೂರು, ಕದನೂರು ಸೇರಿದಂತೆ ಹಲವು ಗ್ರಾಮಗಳ ವ್ಯಾಪ್ತಿಯಲ್ಲಿ ಉತ್ತಮ ಮಳೆ ಆಗಿದೆ.
ಶನಿವಾರ ಬೆಳಿಗ್ಗೆಯಿಂದಲೇ ಮಳೆ ಸುರಿಯುತ್ತಿರುವುದರಿಂದ ಹಳ್ಳಕೊಳ್ಳಗಳು ಮತ್ತೆ ತುಂಬಿ ಹರಿಯಲು ಆರಂಭಿಸಿವೆ.
ಸಮೀಪದ ಭೇತ್ರಿಯಲ್ಲಿನ ಕಾವೇರಿ ಹೊಳೆ ಹಾಗೂ ಕದನೂರು ಹೊಳೆಯ ನೀರಿನ ಮಟ್ಟದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ. ನಿರಂತರ ಮಳೆಯಿಂದ ಭತ್ತದ ಗದ್ದೆಗಳಿಗೆ ಹಲವೆಡೆ ನೀರು ನುಗ್ಗಿದ್ದು, ಬೆಳೆ ಕೊಳೆಯುವ ಆತಂಕ ರೈತರನ್ನು ಕಾಡಲಾರಂಭಿಸಿದೆ.
ಈಗಾಗಲೇ ಎಲ್ಲೆಡೆಭತ್ತದ ನಾಟಿ ಕಾರ್ಯ ಪೂರ್ಣಗೊಂಡಿದ್ದು, ಮೂರು ದಿನಗಳ ಕಾಲ ಇದೇ ರೀತಿ ಮಳೆ ಮುಂದುವರಿದರೆ ಭತ್ತದ ಗದ್ದೆಗಳು ಸಂಪೂರ್ಣ ಜಲಾವೃತಗೊಂಡು ರೈತರು ಸಂಕಷ್ಟಕ್ಕೀಡಾಗುವ ಸಾಧ್ಯತೆ ಇದೆ.