ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರಪೇಟೆ | ಕಾಡುಕೋಣ ಹಾವಳಿ: ಕಾಫಿ ತೋಟಕ್ಕೆ ಹಾನಿ

Published 23 ಮೇ 2024, 4:18 IST
Last Updated 23 ಮೇ 2024, 4:18 IST
ಅಕ್ಷರ ಗಾತ್ರ

ಸೋಮವಾರಪೇಟೆ: ಗೌಡಳ್ಳಿ, ದೊಡ್ಡಮಳ್ತೆ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಾಡುಕೋಣಗಳ ಉಪಟಳ ಹೆಚ್ಚಾಗಿದ್ದು, ಈ ಭಾಗದ ರೈತರು ಪರದಾಡುವಂತಾಗಿದೆ.

ನಿಡ್ತ, ಮಾಲಂಬಿ, ಯಡವನಾಡು ಮೀಸಲು ಅರಣ್ಯಗಳಿಂದ ಬರುವ ಕಾಡುಕೋಣಗಳು ಬೆಳಗಿನ ಜಾವ ಕಾಫಿ ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಅರಣ್ಯದಂಚಿನ ಗ್ರಾಮಗಳಲ್ಲಿ ಕೂಲಿ ಕಾರ್ಮಿಕರು ಕಾಫಿ ತೋಟಗಳಲ್ಲಿ ಕೆಲಸ ಮಾಡಲು ಭಯಪಡುತ್ತಿದ್ದಾರೆ.

ಬುಧವಾರ ಬೆಳಿಗ್ಗೆ ಹಿರಿಕರ, ಹೆಗ್ಗುಳ ಮತ್ತು ಚಿಕ್ಕಾರ ಗ್ರಾಮಗಳ ತೋಟಗಳಲ್ಲಿ ಕಾಡುಕೋಣಗಳು ಹಾವಳಿ ಮಾಡಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

‘ಕಾಫಿ ತೋಟದಲ್ಲಿ ಬೆಳಗಿನ ಜಾವ ಆಹಾರ ಸೇವಿಸಿ, ಕಾದಾಡುವುದರಿಂದ ಗಿಡಗಳು ಹಾಳಾಗಿವೆ. ಎಚ್.ಪಿ.ಸುರೇಶ್, ರಾಜಪ್ಪ, ಜಿ.ಕೆ.ಸುರೇಶ್‌ ಎಂಬವರ ತೋಟಗಳಲ್ಲಿ ಕಾಫಿ ಗಿಡಗಳು ಹಾಳಾಗಿವೆ.
ಕಾಡಾನೆಗಳಿಂದ ಕಾಟ ಕಡಿಮೆಯಾದಂತೆ ಕಾಡುಕೋಣಗಳ ಹಾವಳಿ ಪ್ರಾರಂಭವಾಗಿದೆ. ಬೆಳಗಿನ ಜಾವ ಕಾಫಿ ತೋಟಗಳಿಗೆ ಕಾಲ್ನಡಿಗೆಯಲ್ಲಿ ತೆರಳಲು ಭಯವಾಗುತ್ತದೆ. ಹಗಲಿನ ವೇಳೆ ಕೆಲಸಕ್ಕೆ ಕೂಲಿ ಕಾರ್ಮಿಕರು ಬರುತ್ತಿಲ್ಲ. ಅರಣ್ಯ ಇಲಾಖೆ ಕಾಡಕೋಣಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಕಾಫಿ ಬೆಳೆಗಾರ ಎಚ್.ಪಿ.ತ್ರಿಲೋಕ್ ಒತ್ತಾಯಿಸಿದ್ದಾರೆ.

‘ಹೆಗ್ಗುಳ ಗ್ರಾಮದಲ್ಲಿ ಮಾಲಂಬಿ ಬೆಟ್ಟದ ಕಡೆಯಿಂದ ಬರುವ ಕಾಡೆಮ್ಮೆಗಳು ಬೆಳಿಗ್ಗೆಯಾದರೂ, ಕದಲದೆ, ಕಾಫಿ ತೋಟಗಳಲ್ಲಿಯೇ ಸಂಚರಿಸುತ್ತಿವೆ. ಇದರಿಂದಾಗಿ ಬೆಳಿಗ್ಗೆ ತೋಟದತ್ತ ತೆರಳಲು ಸಮಸ್ಯೆಯಾಗಿದೆ’ ಎಂದು ಸ್ಥಳೀಯ ರೈತರು ದೂರಿದ್ದಾರೆ.

‘ಕಾಡು ಕೋಣಗಳು ಕಾಫಿ ತೋಟವನ್ನು ಅರಣ್ಯ ಎಂದು ತಿಳಿದು ಚಿಗುರು ಹುಲ್ಲು ಮೇಯಲು ಬರುತ್ತವೆ. ಕಾಡುಕೋಣ ಇರುವುದು ಕಂಡುಬಂದಲ್ಲಿ ರೈತರು ಸುರಕ್ಷಿತ ಅಂತರ ಕಾಯ್ದುಕೊಳ್ಳವ ಮೂಲಕ ದೂರವಿರಬೇಕು. ಕಂಡರೆ ದಾಳಿ ಮಾಡುತ್ತವೆ. ಎರಡು ಮೂರು ದಿನ ತೋಟದೊಳಗೆ ಇದ್ದರೆ, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಲ್ಲಿ ಸಿಬ್ಬಂದಿ ಬಂದು ಅವುಗಳನ್ನು ಕಾಡಿಗೆ ಓಡಿಸಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಗಾನಶ್ರೀ ಪ್ರತಿಕ್ರಿಯಿಸಿದರು.

ಗಾನಶ್ರೀ ಆರ್.ಎಫ್.ಒ ಶನಿವಾರಸಂತೆ ವಲಯ
ಗಾನಶ್ರೀ ಆರ್.ಎಫ್.ಒ ಶನಿವಾರಸಂತೆ ವಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT