ಸೋಮವಾರಪೇಟೆ ತಾಲ್ಲೂಕಿನ ಸಜ್ಜಳ್ಳಿ ಗ್ರಾಮದ ಶ್ಯಾಮ್ ಎಂಬುವವರ ಕೃಷಿ ಜಮೀನಿನಲ್ಲಿ ಬೀಡುಬಿಟ್ಟಿರುವ ಕಣ್ಣು ಕಾಣದ ಕಾಡಾನೆಯನ್ನು ಅರಣ್ಯಕ್ಕೆ ಅಟ್ಟುತ್ತಿರುವ ಸ್ಥಳೀಯರು.
ಕೊಡಗಿನ ಗಡಿ ಭಾಗದಲ್ಲಿ ಆತಂಕದ ಛಾಯೆ ‘ಅರ್ಜುನ’ ಆನೆಯ ಸಾವಿಗೆ ಕೊಡಗಿನಲ್ಲಿ ಕಂಬನಿ ಕಾಡಾನೆಗಳ ಭೀತಿಯಲ್ಲೇ ಸಾಗಿದೆ ಜನರ ಬದುಕು
ಪರಿಹಾರ ಕಾಣದ ಕರುಡು ಆನೆ ಸಮಸ್ಯೆ ಡಿ.ಪಿ.ಲೋಕೇಶ್
ಸೋಮವಾರಪೇಟೆ: ಇಲ್ಲಿಗೆ ಸಮೀಪದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವನಾಡು ಮೀಸಲು ಅರಣ್ಯದಂಚಿನಲ್ಲಿ ಕೆಲವು ದಿನಗಳಿಂದ ಕಾಣಿಸಿಕೊಂಡಿದ್ದ ಕಣ್ಣು ಕಾಣದ ಒಂಟಿ ಕಾಡಾನೆ ಇಂದಿಗೂ ಅದೇ ರೀತಿಯಲ್ಲಿ ಅಲೆದಾಡುತ್ತಿದ್ದು ಜನರ ಆತಂಕ ಮುಂದುವರಿದಿದೆ. ಹಗಲಿನಲ್ಲಿ ಸ್ಥಳೀಯರು ಹಾಗೂ ಅರಣ್ಯ ಸಿಬ್ಬಂದಿಗಳು ಕಾಡಿಗೆ ಓಡಿಸುತ್ತಾರೆ. ನಂತರ ರಾತ್ರಿ ಅದು ಕೃಷಿ ಭೂಮಿಗೆ ಬರುತ್ತಿದೆ. ಕಣ್ಣು ಕಾಣದ ಹಿನ್ನೆಲೆ ಸಜ್ಜಳ್ಳಿ ಹಾಡಿಯ ಲೋಕೇಶ್ ಎಂಬುವವರ ಕೃಷಿ ಜಮೀನಿನಲ್ಲಿ ಬೆಳೆದು ನಿಂತಿರುವ ಕಾಡು ಹುಲ್ಲನ್ನು ತಿಂದು ಅಲ್ಲಿಯೇ ವಿಶ್ರಮಿಸುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ‘ಆನೆ ಕಳೆದ ಮೂರು ದಿನಗಳಿಂದ ಇಲ್ಲಿಗೆ ಬಂದಿರಲಿಲ್ಲ. ಮತ್ತೆ ಭಾನುವಾರ ರಾತ್ರಿಯಿಂದ ಕಾಣಿಸಿಕೊಂಡಿದೆ. ಸಜ್ಜಳ್ಳಿ ಗ್ರಾಮದ ಆಸುಪಾಸಿನಲ್ಲಿಯೇ ಇರುತ್ತದೆ. ಜಮೀನಿನಲ್ಲಿ ಬೆಳೆದಿರುವ ಹುಲ್ಲನ್ನು ತಿಂದ ನಂತರ ಅಲ್ಲಿಯೇ ಇರುವ ಆನೆಯನ್ನು ಸ್ಥಳೀಯ ಗ್ರಾಮಸ್ಥರ ನೆರವಿನೊಂದಿಗೆ ದನಗಳನ್ನು ಓಡಿಸುವಂತೆ ಓಡಿಸಿಕೊಂಡು ಕಾಡಿಗೆ ಬಿಡಲಾಗುತ್ತಿದೆ. ಆನೆ ನಿಂತಿರುವುದು ಕಾಡಾನೆಯೋ ಕುರುಡು ಆನೆಯೋ ತಿಳಿಯುವುದಿಲ್ಲ. ಈ ಭಾಗದಲ್ಲಿ ಜನರು ಭಯಭೀತರಾಗಿದ್ದಾರೆ. ಕೂಡಲೇ ಆನೆಯನ್ನು ಹಿಡಿದು ಸಾಗಿಸಬೇಕು’ ಎಂದು ಸ್ಥಳೀಯ ನಿವಾಸಿ ಶ್ಯಾಮ್ ತಿಳಿಸಿದರು. ಸೋಮವಾರಪೇಟೆ ಅರಣ್ಯ ಇಲಾಖೆಯ ರೇಂಜರ್ ಚೇತನ್ ಮಾತನಾಡಿ ‘ಆನೆಯ ಬಗ್ಗೆ ಮೇಲಧಿಕಾರಿಗಳಿಗೆ ತಿಳಿಸಲಾಗಿದೆ. ಇಂದಿಗೂ ಅದನ್ನು ಹಿಡಿಯುವುದು ಮತ್ತು ಚಿಕಿತ್ಸೆಯ ಬಗ್ಗೆ ಯಾವುದೇ ಆದೇಶವಾಗಿಲ್ಲ. ಆನೆಗೆ ಒಂದು ಕಣ್ಣು ಸ್ವಲ್ಪ ಕಾಣುತ್ತಿರಬೇಕು. ಅದನ್ನು ಹಿಡಿದ ನಂತರವೇ ಸರಿಯಾದ ಮಾಹಿತಿ ಸಿಗುವುದು. ಮೇಲಧಿಕಾರಿಗಳು ಆನೆಯ ಚಲನವಲನವನ್ನು ಅಭ್ಯಸಿಸಲು ತಿಳಿಸಿದ್ದು ನೋಡಿಕೊಳ್ಳುತ್ತಿದ್ದೇವೆ. ಹಾರಂಗಿ ಹಿನ್ನೀರಿನ ಬಳಿಯ ಅರಣ್ಯಕ್ಕೆ ಓಡಿಸಲಾಗಿತ್ತು. ಮತ್ತೆ ಸಜ್ಜಳ್ಳಿ ಹಾಡಿ ಬದಿಯ ಅರಣ್ಯಕ್ಕೆ ಬಂದು ಸೇರಿದೆ’ ಎಂದು ತಿಳಿಸಿದರು.