ಶನಿವಾರಸಂತೆ: ಇಲ್ಲಿಗೆ 8 ಕಿ.ಮೀ ದೂರದ ಹಾಸನ ಜಿಲ್ಲೆಯ ಯಸಳೂರು ಸಮೀಪದ ಬಾಳೆಕೆರೆ ದಬ್ಬಳ್ಳಿಯಲ್ಲಿ ಕಾಡಾನೆಗಳನ್ನು ಹಿಡಿಯಲು ಬಂದಿದ್ದ ದಸರಾ ಆನೆ ‘ಅರ್ಜುನ’ನ ದುರಂತ ಸಾವು ಹೋಬಳಿಯ ರೈತರನ್ನೂ ತಲ್ಲಣಗೊಳಿಸಿದೆ.
ಅರ್ಜುನ ಆನೆಯೊಂದಿಗೆ ಕಾದಾಟ ನಡೆಸಿದ ಕಾಡಾನೆ ಸೇರಿದಂತೆ ಅದರೊಂದಿಗೆ 20ಕ್ಕೂ ಅಧಿಕ ಕಾಡಾನೆಗಳಿರುವ ಹಿಂಡು ಕೇವಲ ಹಾಸನ ಜಿಲ್ಲೆಯಲ್ಲಿ ಮಾತ್ರವಲ್ಲ ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಹೋಬಳಿಗಳಲ್ಲೂ ರೈತರ ಗದ್ದೆ, ತೋಟಗಳನ್ನು ನಿರಂತರವಾಗಿ ನಾಶಗೊಳಿಸುತ್ತಿವೆ.
ಇಲ್ಲಿನ ಮಾದ್ರೆ, ದಂಡಳ್ಳಿ, ಕಿರುಬಿಳಹ, ದೊಡ್ಡಬಿಳಹ, ಕೂಜಗೇರಿ, ಬೆಂಬಲೂರು, ಕ್ಯಾತೆ ಸೇರಿದಂತೆ ಸುತ್ತಮುತ್ತಲ ಹಲವು ಗ್ರಾಮಗಳಲ್ಲೂ ಈ ಕಾಡಾನೆಗಳು ಭೀತಿ ಮೂಡಿಸಿವೆ. ಇದರಿಂದ ರೈತರಿಗೆ ಅಪಾರ ನಷ್ಟ ಸಂಭವಿಸಿರುವುದು ಮಾತ್ರವಲ್ಲ ಜೀವಕ್ಕೂ ಬೆದರಿಕೆ ಎನಿಸಿವೆ.
ಕೊಡಗು– ಹಾಸನ ಗಡಿಭಾಗದ ಮತ್ತೂರು ಅರಣ್ಯ ವ್ಯಾಪ್ತಿಯಲ್ಲಿ ಈ ಕಾಡಾನೆಗಳು ಬೀಡು ಬಿಟ್ಟಿವೆ. ಇವುಗಳು ರಾತ್ರಿ ವೇಳೆ ನಿರಂತರವಾಗಿ ರೈತರ ಬೆಳೆಗಳನ್ನು ನಾಶಗೊಳಿಸುತ್ತಿವೆ. ಇಲ್ಲಿಂದ ಶನಿವಾರಸಂತೆ ಪಟ್ಟಣ ದಾಟಿ ಕೊಡಗಿನ ಮಾಲಂಬಿ ಮೀಸಲು ಅರಣ್ಯಕ್ಕೂ ಈ ಕಾಡಾನೆಗಳು ಸಂಚರಿಸುತ್ತಿವೆ. ಇದರಿಂದ ಕಾಫಿತೋಟಗಳಲ್ಲಿ ಕಾಫಿ ಫಸಲು ತೆಗೆಯಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ.
ಕಾಡಾನೆಯೊಂದಿಗೆ ಸೆಣಸಾಟ ನಡೆಸಿ ಸಿಬ್ಬಂದಿ ಪ್ರಾಣ ಉಳಿಸಿದ ‘ಅರ್ಜುನ’ ಆನೆಯ ಸಾವಿನ ನಂತರ ಕಾಡಾನೆಗಳು ಮತ್ತೆ ದಾಳಿ ನಡೆಸುವ ಸಾಧ್ಯತೆಯನ್ನು ಮನಗಂಡು ಕಾರ್ಯಾಚರಣೆಯನ್ನು ಮೊಟಕುಗೊಳಿಸಿ ಇನ್ನಿತರ ಸಾಕಾನೆಗಳನ್ನು ವಾಪಸ್ ಶಿಬಿರಕ್ಕೆ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅರ್ಜುನ ಆನೆ ಮೃತಪಟ್ಟ ಜಾಗದಲ್ಲಿ ನೀರವ ಮೌನ ಆವರಿಸಿದೆ. ಮಾವುತ ಕುಸಿದು ಬಿದ್ದು ಪರಿತಪಿಸುತ್ತಿದ್ದ ದೃಶ್ಯ ಕರುಳು ಹಿಂಡುವಂತಿತ್ತು.
ಕೊಡಗಿನ ಗಡಿ ಭಾಗದಲ್ಲಿ ಆತಂಕದ ಛಾಯೆ ‘ಅರ್ಜುನ’ ಆನೆಯ ಸಾವಿಗೆ ಕೊಡಗಿನಲ್ಲಿ ಕಂಬನಿ ಕಾಡಾನೆಗಳ ಭೀತಿಯಲ್ಲೇ ಸಾಗಿದೆ ಜನರ ಬದುಕು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.