ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈನ್ ತಯಾರಿಸಿ ಯಶಸ್ಸು ಪಡೆದ ಮಹಿಳೆಯರು

ಮಡಿಕೇರಿ: ಪೊನ್ನಂಪೇಟೆ ತಾಲ್ಲೂಕಿನ ದುರ್ಗಾ ಪರಮೇಶ್ವರಿ ಸಂಘದ ಸಾಧನೆ
Published 6 ಅಕ್ಟೋಬರ್ 2023, 7:39 IST
Last Updated 6 ಅಕ್ಟೋಬರ್ 2023, 7:39 IST
ಅಕ್ಷರ ಗಾತ್ರ

ಮಡಿಕೇರಿ: ತೋಟದಲ್ಲಿ ಕೊಳೆತು ಗೊಬ್ಬರವಾಗುತ್ತಿದ್ದ ಹಣ್ಣುಗಳು ಇದೀಗ ಮಹಿಳೆಯರ ಜೇಬು ತುಂಬಿಸುತ್ತಿವೆ. ಒಂದು ದಿನದ ತರಬೇತಿ 10 ಮಂದಿಯ ಮಹಿಳೆಯರ ಬದುಕಿನ ದಿಕ್ಕನ್ನೇ ಬದಲಿಸಿದೆ. ನಿತ್ಯವೂ ಹಣ ಗಳಿಸುವ ಮೂಲಕ ಯಶಸ್ಸಿನ ಹಾದಿಯಲ್ಲಿ ಇವರು ಮೇಲೇರುತ್ತಿದ್ದಾರೆ.

ಪೊನ್ನಂಪೇಟೆ ತಾಲ್ಲೂಕಿನ ಮತ್ತೂರು ಗ್ರಾಮದ ದುರ್ಗಾ ಪರಮೇಶ್ವರಿ ಸಂಘದ 10 ಮಂದಿ ಮಹಿಳೆಯರು ಕೃಷಿ ಇಲಾಖೆಯ ಮಹತ್ವಕಾಂಕ್ಷೆಯ ‘ಆತ್ಮ’ ಯೋಜನೆಯಡಿ ವೈನ್ ತಯಾರಿಕೆಯ ತರಬೇತಿ ಪಡೆದುಕೊಂಡರು. ಕೃಷಿ ಇಲಾಖೆ ಇವರಿಗೆ ವೈನ್ ತಯಾರಿಕೆಯ ಜತೆಗೆ ಬೇಕರಿ ಉತ್ಪನ್ನಗಳ ತಯಾರಿಕೆಯ ತರಬೇತಿಯನ್ನೂ ನೀಡಿ ₹ 10 ಸಾವಿರ ಸಹಾಯಧನವನ್ನೂ ನೀಡಿತು.

ಪಡೆದ ತರಬೇತಿ ಹಾಗೂ ಸಹಾಯಧನವನ್ನು ಬಳಸಿಕೊಂಡ ಈ ಮಹಿಳೆಯರು ತಮ್ಮ ತೋಟಗಳಲ್ಲಿ ಕೊಳೆತು ಹಾಳಾಗುತ್ತಿದ್ದ ಹಣ್ಣುಗಳನ್ನು ಹೆಕ್ಕಲಾರಂಭಿಸಿದರು.

ಆರಂಭದಲ್ಲಿ ಇವರ ಪ್ರಯತ್ನ ಕಂಡು ಮೂಗು ಮುರಿದವರೇ ಹೆಚ್ಚು. ಇದೊಂದು ವ್ಯರ್ಥ ಪ್ರಯತ್ನ ಎಂದವರೇ ಅಧಿಕ. ಆದರೆ, ಕ್ರಮೇಣ ಇವರು ತಮ್ಮ ಪ್ರಯತ್ನದಲ್ಲಿ ಒಂದೊಂದೇ ಹೆಜ್ಜೆ ಇಡುತ್ತಾ ಯಶಸ್ಸಿನ ಶಿಖರವೇರಿದರು.

ಸಂಘದ ಎಲ್ಲ ಸದಸ್ಯರು ತೋಟಗಳನ್ನು ಹೊಂದಿದ್ದಾರೆ. ಹೀಗಾಗಿ, ಸುಲಭವಾಗಿ ಇವರಿಗೆ ಹಣ್ಣುಗಳು ದೊರೆತವು. ಈ ಹಣ್ಣುಗಳ ಜತೆಗೆ ಮೈಸೂರಿನಿಂದ ಇಲ್ಲಿ ದೊರೆಯದ ಹಣ್ಣುಗಳನ್ನೂ ತರಿಸಿಕೊಂಡು ವೈನ್ ತಯಾರಿಕೆ ಆರಂಭಿಸಿಯೇ ಬಿಟ್ಟರು.

ಆರಂಭದ ತಿಂಗಳು 500 ಲೀಟರ್‌ ವೈನ್‌ನ್ನು ತಯಾರಿಸಿ ಪ್ರತಿ ಲೀಟರ್‌ಗೆ ₹ 250ರಂತೆ ಮಾರಾಟ ಮಾಡಿದರು. ಇದರಿಂದ ಉತ್ತೇಜಿತರಾದ ಮಹಿಳೆಯರು ನಂತರ ಎರಡುಪಟ್ಟು ತಯಾರಿಸಿ ಲಾಭ ಗಳಿಸಿದರು.

ವೈನ್‌ ಜತೆಗೆ ಮಸಾಲೆ ಪುಡಿಗಳನ್ನೂ ತಯಾರಿಸುತ್ತಿದ್ದೇವೆ. ಮಹಿಳೆಯರು ಈ ರೀತಿ ಸ್ವಾವಲಂಬಿಯಾಗಿ ಬದುಕಬಹುದು. ಮೊದಲು ಪ್ರಯತ್ನ ಮಾಡುವುದು ಮುಖ್ಯ.
ರೋಹಿಣಿ ಸುಬ್ಬಯ್ಯ ದುರ್ಗಾ ಪರಮೇಶ್ವರಿ ಸಂಘದ ಅಧ್ಯಕ್ಷೆ

ಇವರು ಕೇವಲ ತಯಾರಿಕೆಯನ್ನಷ್ಟೇ ಮಾಡದೇ, ತಯಾರಿಸಿದ್ದು ಸ್ವಲ್ಪವೂ ಉಳಿದುಕೊಳ್ಳದೇ ಮಾರಾಟ ಮಾಡಲು ವಿವಿಧ ಬಗೆಯ ತಂತ್ರಗಳನ್ನು ಅನಸರಿಸಿದರು. ತಮ್ಮದೇ ಸಂಘದ ಹೆಸರಿನಡಿ ಒಂದು ಬ್ರಾಂಡಿಂಗ್‌ ಮಾಡಿದರು. ಈ ಬ್ರಾಂಡ್‌ನಡಿ ಹೆಚ್ಚು ಮಾರಾಟವಾಯಿತು.

ಕೊಡಗಿನಲ್ಲಿರುವ ಸಾಂಬಾರ ಪದಾರ್ಥಗಳ ಮಳಿಗೆಗಳಲ್ಲಿ ತಾವು ತಯಾರಿಸಿದ ವೈನ್‌ನ್ನು ಪ್ರದರ್ಶಿಸಿದರು. ಸಾಂಬಾರ ಪದಾರ್ಥಗಳನ್ನು ಖರೀದಿಸಲು ಬಂದ ಪ್ರವಾಸಿಗರು ಈ ವೈನ್‌ನ್ನೂ ಖರೀದಿಸಿದರು.

ಇದರೊಂದಿಗೆ ಸಾವಯವ ವಿಧಾನದಲ್ಲಿ ಅರಿಸಿನ ಮತ್ತು ಕಾಳುಮೆಣಸನ್ನು ಬೆಳೆದು ಅದನ್ನು ಪುಡಿ ಮಾಡಿ ಮಾರಾಟವ ಮಾಡುತ್ತಿದ್ದಾರೆ.

ಈ ಕುರಿತು ‘‍ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕೃಷಿ ಇಲಾಖೆಯ ‘ಆತ್ಮ’ ಯೋಜನೆಯ ಉಪಯೋಜನಾ ನಿರ್ದೇಶಕಿ ಪಿ.ಜಿ.ಮೈತ್ರಿ, ‘ಇದು ಮಹಿಳೆಯರ ಸಾಮರ್ಥ್ಯ ಬಲವರ್ಧನೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಾಯಧನದಡಿ ನಡೆಯುವ ಕಾರ್ಯಕ್ರಮ. ಈ ಆತ್ಮ ಯೋಜನೆಯಡಿ ಕೇಂದ್ರ ಸರ್ಕಾರ ಶೇ 60 ಹಾಗೂ ರಾಜ್ಯ ಸರ್ಕಾರ ಶೇ 40ರಷ್ಟು ಹಣ ನೀಡುತ್ತದೆ. ಈ ಹಣವನ್ನು ಬಳಕೆ ಮಾಡಿ ಸ್ತ್ರೀಶಕ್ತಿ ಸಂಘಗಳಿಗೆ ಬೇಕರಿ ಉತ್ಪನ್ನಗಳ ತಯಾರಿಕೆ ಸೇರಿದಂತೆ ವೈನ್ ತಯಾರಿಕೆ, ಜೇನು ಸಾಕಣೆಯಂತಹ ತರಬೇತಿಗಳನ್ನು ನೀಡಲಾಗುತ್ತದೆ’ ಎಂದ ಹೇಳಿದರು.

ಈ ರೀತಿ ತರಬೇತಿ ಪಡೆದ ಸಂಘದ ಸದಸ್ಯರು ಸ್ವತಃ ತಯಾರಿಕೆ ಆರಂಭಿಸಿ, ತಮ್ಮದೆ ಬ್ರಾಂಡ್‌ ರೂಪಿಸಿಕೊಂಡು ಸಂಘದ ಹೆಸರಿನಲ್ಲಿ ಮಾರಾಟ ಮಾಡುತ್ತಾರೆ. ಇದರಿಂದ ಅವರು ಲಾಭ ಗಳಿಸುವುದು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ತರಬೇತಿ ಪಡೆಯಲು ಸಂಘವು ನೋಂದಣಿಯಾಗಿರುವುದು ಕಡ್ಡಾಯ. ಸಂಘದಲ್ಲಿ ಕನಿಷ್ಠ 20 ಮಂದಿ ಸದಸ್ಯರು ಇರಲೇಬೇಕು.
ಪಿ.ಜಿ.ಮೈತ್ರಿ, ಕೃಷಿ ಇಲಾಖೆಯ ‘ಆತ್ಮ’ ಯೋಜನೆಯ ಉಪಯೋಜನಾ ನಿರ್ದೇಶಕಿ.

ಆನ್‌ಲೈನ್‌ನಲ್ಲೂ ಮಾರಾಟ

ತಯಾರಿಸಿದರಷ್ಟೇ ಸಾಲದು ಅದು ಸುಲಭವಾಗಿ ಮಾರಾಟವಾಗುವಂತೆ ನೋಡಿಕೊಳ್ಳುವುದೂ ಯಶಸ್ಸಿನ ಗುಟ್ಟು. ಅದಕ್ಕಾಗಿಯೇ ದುರ್ಗಾ ಪರಮೇಶ್ವರಿ ಸಂಘದ ಮಹಿಳೆಯರು ವಿವಿಧ ಬಗೆಯ ಮಾರುಕಟ್ಟೆ ತಂತ್ರಗಳನ್ನು ಅನುಸರಿಸಿದರು. ಅದರಲ್ಲಿ ಆನ್‌ಲೈನ್ ಮಾರಾಟವೂ ಒಂದು. ಆನ್‌ಲೈನ್‌ ಮೂಲಕ ಇವರು ಪ್ರಚಾರ ಕೈಗೊಂಡು ಅದರಲ್ಲೇ ಮಾರಾಟ ಮಾಡುತ್ತಿದ್ದು ಯಶಸ್ಸು ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT