ಕೋಲಾರ: ತಾಲ್ಲೂಕಿನ ಶತಶೃಂಗ ಪರ್ವತ ಶ್ರೇಣಿಯ ಅಂತರಗಂಗೆ ಬೆಟ್ಟದಲ್ಲಿ ವಿಶ್ವ ಯೋಗ ದಿನ ಆಚರಿಸಲಾಗುತ್ತಿದ್ದು, ಸಾವಿರಾರು ಮಕ್ಕಳು ಯೋಗಾಸನ ಪ್ರದರ್ಶಿಸುತ್ತಿದ್ದಾರೆ.
100ಕ್ಕೂ ಅಧಿಕ ಯೋಗ ಗುರುಗಳು ಮಾರ್ಗದರ್ಶನ ನೀಡಿದರು.
ನಗರದಿಂದ ಸುಮಾರು 10 ಕಿ.ಮೀ ದೂರವಿರುವ ಬೆಟ್ಟದ ಹಾದಿ ತೀರಾ ಚಿಕ್ಕದಾಗಿದ್ದರಿಂದ ಬೆಳಿಗ್ಗೆಯಿಂದಲೇ ವಾಹನ ದಟ್ಟಣೆ ಉಂಟಾಯಿತು.
ಹೀಗಾಗಿ, ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಶಾಲಾ ಬಸ್ಸಿನಲ್ಲಿ ಬಂದಿದ್ದ ಮಕ್ಕಳು ಪರದಾಡಿದರು. ಬೆಟ್ಟಕ್ಕೆ ವಾಹನ ಬಿಡದ ಕಾರಣ ಸುಮಾರು 10 ಕಿ.ಮೀ ನಡೆದು ಬರಬೇಕಾಯಿತು. ಈ ಬಗ್ಗೆ ಶಿಕ್ಷಕರು, ಪೋಷಕರು ಹಾಗೂ ಮಕ್ಕಳು ಆಕ್ರೋಶ ವ್ಯಕ್ತಪಡಿಸಿದರು. ಕೆಲ ಮಕ್ಕಳು ಅರ್ಧ ದಾರಿಯಲ್ಲಿ ಕುಳಿತು ಯೋಗ ಪ್ರದರ್ಶಿಸಿದರು.
ಸಂಸದ ಎಸ್.ಮುನಿಯಪ್ಪ, ವಿಧಾನ ಪರಿಷತ್ ಸದಸ್ಯರಾದ ನಾರಾಯಣಸ್ವಾಮಿ, ಇಂಚರ ಗೋವಿಂದರಾಜು ಹಾಗೂ ಅಧಿಕಾರಿಗಳು ಇದ್ದರು.