ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳಬಾಗಿಲು: ಕಾಂಪೌಂಡ್ ಇಲ್ಲದೆ ಉದ್ಘಾಟನೆಯಾಗದ ನಾಡ ಕಚೇರಿ

Published 13 ನವೆಂಬರ್ 2023, 13:45 IST
Last Updated 13 ನವೆಂಬರ್ 2023, 13:45 IST
ಅಕ್ಷರ ಗಾತ್ರ

ಮುಳಬಾಗಿಲು: ತಾಲ್ಲೂಕಿನ ಬೈರಕೂರು ಗ್ರಾಮದಲ್ಲಿ ನೂತನ ನಾಡಕಚೇರಿ (ಅಟಲ್ ಜೀ ಜನಸ್ನೇಹಿ ಕೇಂದ್ರ) ಕಟ್ಟಡ ನಿರ್ಮಾಣವಾಗಿದ್ದರೂ ಇನ್ನೂ ಕಾಂಪೌಂಡ್ ಇಲ್ಲದಿರುವುದರಿಂದ ಉದ್ಘಾಟನೆಯಾಗಿಲ್ಲ.

ತಾಲ್ಲೂಕಿನ ಬೈರಕೂರು ಹೋಬಳಿ ಕೇಂದ್ರದಲ್ಲಿ ಕೋಲಾರ ನಿರ್ಮಿತಿ ಕೇಂದ್ರದ ವತಿಯಿಂದ 2018-19ನೇ ಸಾಲಿನಲ್ಲಿ ನಾಡ ಕಚೇರಿ ಕಟ್ಟಡವನ್ನು ಲಕ್ಷಾಂತರ ರೂಗಳ ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಿಸಲಾಗಿದೆ. ಆದರೆ, ಇನ್ನೂ ಕಾಂಪೌಂಡ್ ವ್ಯವಸ್ಥೆ ಇಲ್ಲದಿರುವ ಕಾರಣದಿಂದ ಕಟ್ಟಡದಲ್ಲಿ ಇನ್ನೂ ಕಚೇರಿ ವ್ಯವಹಾರಗಳು ನಡೆಯುತ್ತಿಲ್ಲ.

ಕಟ್ಟಡದಲ್ಲಿ ವಿದ್ಯುತ್‌, ನೀರು, ಶೌಚಾಲಯ, ಉಪ ತಹಶೀಲ್ದಾರ್ ಕೋಣೆ, ಕಂಪ್ಯೂಟರ್ ಕೊಠಡಿ, ಕಚೇರಿಗೆ ಬರುವ ಸಾರ್ವಜನಿಕರಿಗೆ ಕೂರಲು ವಿಶಾಲವಾದ ಪ್ರಾಂಗಣ ಮುಂತಾದ ಎಲ್ಲಾ ಸೌಕರ್ಯಗಳನ್ನು ಒದಗಿಸಲಾಗಿದೆ. ಆದರೆ, ಕೇವಲ ಕಾಂಪೌಂಡ್ ಇಲ್ಲದ ಕಾರಣದಿಂದ ಇನ್ನೂ ಪರಿಪೂರ್ಣವಾಗಿ ಕಚೇರಿ ಕೆಲಸಗಳಿಗೆ ನಾಡಕಚೇರಿಯನ್ನು ತೆರೆಯದಿರುವುದು ಸರಿಯಲ್ಲ ಎನ್ನುತ್ತಾರೆ ನಾಗರಿಕರು.

ಸುಮಾರು 20 ವರ್ಷಗಳಿಂದ ನಾಡ ಕಚೇರಿಗೆ ನೂತನ ಹಾಗೂ ಪ್ರತ್ಯೇಕ ಕಟ್ಟಡದ ವ್ಯವಸ್ಥೆ ಇಲ್ಲದೆ ಇರುವ ಕಾರಣದಿಂದ ಈ ಹಿಂದೆ  ಬಾಡಿಗೆ ಕಟ್ಟಡದಲ್ಲಿ ಹಾಗೂ ಇತ್ತೀಚಿಗೆ ಗ್ರಾಮ ಪಂಚಾಯಿತಿ ಕಟ್ಟಡದ ಆವರಣದಲ್ಲಿ ಕೆಲಸ ಮಾಡುತ್ತಿದೆ. ಹೀಗಾಗಿ ನಾಡ ಕಚೇರಿಗಾಗಿ ಪಂಚಾಯಿತಿ ಕಟ್ಟಡದ ವೃತ್ತದಲ್ಲಿ ಕಟ್ಟಡವನ್ನು ನಿರ್ಮಿಸಲಾಗಿದೆ. ಆದರೆ ಇನ್ನೂ ಕಟ್ಟಡ ಉದ್ಘಾಟನೆ ಆಗದ ಕಾರಣದಿಂದ ಇಕ್ಕಟ್ಟಾದ ಪಂಚಾಯಿತಿ ಆವರಣದ ಕೊಠಡಿಗಳಲ್ಲಿಯೇ ಇನ್ನೂ ನಾಡ ಕಚೇರಿ ಉಳಿದುಕೊಂಡಿದೆ.

ನೂತನ ಕಟ್ಟಡ ನಿರ್ಮಾಣದ ಕ್ರಿಯಾ ಯೋಜನೆಯಲ್ಲಿ ಕಾಂಪೌಂಡ್ ನಿರ್ಮಾಣಕ್ಕೆ ಅವಕಾಶ ಇಲ್ಲ. ಹಾಗಾಗಿ, ಕಟ್ಟಡ ಪೂರ್ಣಗೊಂಡು ಸುಮಾರು ಒಂದು ವರ್ಷ ಕಳೆದರೂ ಇನ್ನೂ ಕಾಂಪೌಂಡ್ ವ್ಯವಸ್ಥೆ ಇಲ್ಲದಂತಾಗಿದೆ. ಈ ಹಿಂದಿನ ಶಾಸಕ ಎಚ್.ನಾಗೇಶ್ ಅವರಿಗೆ ಅರ್ಜಿ ನೀಡಿ ತಮ್ಮ ಅನುದಾನದಲ್ಲಿ ಕಾಂಪೌಂಡ್ ಮಂಜೂರು ಮಾಡಲು ಅರ್ಜಿಯನ್ನು ಸಲ್ಲಿಸಲಾಗಿದ್ದರೂ ಚುನಾವಣಾ ನೀತಿ ಸಂಹಿತೆ ಇದ್ದಿದ್ದರಿಂದ ಅನುದಾನ ಮಂಜೂರಾಗಿರಲಿಲ್ಲ. ಹೀಗಾಗಿ ಹಾಲಿ ಶಾಸಕರಾದರೂ ಕಾಂಪೌಂಡಿಗೆ ಅನುದಾನ ನೀಡಿದರೆ ಕಟ್ಟಡಕ್ಕೆ ಉದ್ಘಾಟನೆ ಭಾಗ್ಯ ಸಿಗಲಿದೆ.

ಕಾಂಪೌಂಡ್ ಇಲ್ಲದೆ ಇರುವ ಕಾರಣದಿಂದ ಸುತ್ತಮುತ್ತಲಿನ ಜನ ಜನ ಬಳಕೆಯ ನಾನಾ ಸಾಮಾಗ್ರಿಗಳನ್ನು ಕಟ್ಟಡಕ್ಕೆ ಒರಗಿಸುತ್ತಿದ್ದಾರೆ. ಹೀಗಾಗಿ ಕಟ್ಟಡದ ಗೋಡೆಗಳಿಗೆ ಹಾನಿಯಾಗುವ ಸಾಧ್ಯತೆ ಇದೆ.

ಈ ಸಂಬಂಧ ನಾಡ ಕಚೇರಿಯ ಉಪ ತಹಶೀಲ್ದಾರ್ ಕೆ.ಟಿ ವೆಂಕಟೇಶಪ್ಪ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದರೆ ನೂತನ ಕಟ್ಟಡಕ್ಕೆ ಕಾಂಪೌಂಡ್ ಇಲ್ಲದೆ ಇರುವ ಕಾರಣದಿಂದ ಕಟ್ಟಡ ಇನ್ನೂ ಉದ್ಘಾಟನೆ ಆಗಿಲ್ಲ.ಆದರೆ ಜಿಲ್ಲಾಧಿಕಾರಿಗಳ ಸೂಚನೆಯಂತೆ ಕಟ್ಟಡದಲ್ಲಿ ಕೆಲವು ದಿನಗಳಿಂದ ತಾತ್ಕಾಲಿಕವಾಗಿ ಕಚೇರಿ ವ್ಯವಹಾರಗಳನ್ನು ನಡೆಸಲಾಗುತ್ತಿದೆ.ಇನ್ನು ಕಾಂಪೌಂಡ್ ನಿರ್ಮಾಣಕ್ಕಾಗಿ ಶಾಸಕರಿಗೆ ಮನವಿಯನ್ನು ಸಲ್ಲಿಸಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT